
ಬೆಂಗಳೂರಿನ ಡಾ.ಎಚ್.ಸಿ.ಮಹದೇವಪ್ಪ ಅವರ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಚರ್ಚಿಸಿದರು
ಮೈಸೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಹಂಚಿಕೆ ಮಾಡಿರುವುದರಲ್ಲಿ ತಾಂತ್ರಿಕ ದೋಷಗಳಿದ್ದು, ಅವನ್ನು ಸರಿಪಡಿಸಬೇಕೆಂದು ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟವು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್. ಸಿ. ಮಹದೇವಪ್ಪ ಅವರಿಗೆ ಮನವಿ ಮಾಡಿದೆ.
ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ವಿದ್ಯಾರ್ಥಿಗಳು ಒಳ ಮೀಸಲಾತಿ ಬಗ್ಗೆ ಚರ್ಚಿಸಿದರು. ಒಳ ಮೀಸಲಾತಿ ವರದಿ ಜಾರಿ ಮಾಡಿದರೆ ಬಲಗೈ ಸಮುದಾಯಕ್ಕೆ ಆಗುವ ಅನ್ಯಾಯದ ಬಗ್ಗೆ ವಿವರಿಸಿದರು.
‘ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಮಾಡುವಾಗ ವಿಭಾಗಗಳನ್ನು ಘಟಕವೆಂದು ಪರಿಗಣಿಸದೆ ಇಡೀ ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸುವುದರ ಮೂಲಕ ಪರಿಶಿಷ್ಟ ಎಲ್ಲ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಒಂದು ಹುದ್ದೆ ಇದ್ದಾಗ ಪರಿಶಿಷ್ಟ ಜಾತಿಯ ಎ, ಬಿ, ಸಿಯ ಮೂರು ಪ್ರವರ್ಗದವರು ಸ್ಪರ್ಧಿಸಲು ಮುಕ್ತ ಅವಕಾಶ ನೀಡಬೇಕು. ಯಾವುದೇ ಇಲಾಖೆಯಲ್ಲಿ ಒಂದೊಂದೇ ಹುದ್ದೆ ಇದ್ದಾಗ ಎಲ್ಲಾ ಒಂದು ಹುದ್ದೆಗಳು ಒಂದೇ ಪ್ರವರ್ಗಕ್ಕೆ ಹೋಗುವುದನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.
‘ಜಾತಿ ಪ್ರಮಾಣಪತ್ರ ವಿತರಿಸುತ್ತಿರುವುದನ್ನು ಸರಳೀಕೃತಗೊಳಿಸಬೇಕು. ಅದರ ತಂತ್ರಾಂಶ ಸರಿಪಡಿಸಬೇಕು. ಹೊಸ ಜಾತಿ ಪ್ರಮಾಣಪತ್ರ ಮಾಡಿಸದ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಶೈಕ್ಷಣಿಕವಾಗಿ ತೊಂದರೆಯಾಗದಂತೆ ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಚಿನ್ನಸ್ವಾಮಿ, ಮಹದೇವ ಪ್ರಸಾದ್ ಎಚ್.ಎಸ್., ಸಿದ್ದಪ್ಪಾಜಿ ಕೆ.ಎಸ್., ಸುಭಾಷ್ ಅಪ್ಪು, ಕರಾಮುವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಹೇಶ್ ಸೋಸಲೆ, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ಸಂಶೋಧನಾ ವಿದ್ಯಾರ್ಥಿಗಳಾದ ಮಾದೇಶ್ ಸೀಗಿ, ಶಿವು ಬಂಡಳ್ಳಿ, ನವೀನ್ ಕೋಳೂರು, ಉಪನ್ಯಾಸಕರಾದ ಪ್ರತಾಪ್, ಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.