ADVERTISEMENT

ಅಭಿಯಂತರರು ಸಂಸ್ಥೆ 33ನೇ ವಾರ್ಷಿಕೋತ್ಸವ: 5 ದಿನಗಳ ರಾಷ್ಟ್ರೀಯ ರಂಗ ಉತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:21 IST
Last Updated 26 ಫೆಬ್ರುವರಿ 2026, 6:21 IST
ಮೈಸೂರಿನ ಕಿರು ರಂಗಮಂದಿರದಲ್ಲಿ ಅಭಿಯಂತರರು ರಂಗ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ರಂಗ ಉತ್ಸವ ಕಾರ್ಯಕ್ರಮವನ್ನು ಹಿ.ಚಿ.ಬೋರಲಿಂಗಯ್ಯ ಉದ್ಘಾಟಿಸಿದರು. ಎಚ್.ಎಸ್‌. ಸುರೇಶ್ ಬಾಬು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಶಶಿಧರ್ ಭಾರಿಘಾಟ್ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಕಿರು ರಂಗಮಂದಿರದಲ್ಲಿ ಅಭಿಯಂತರರು ರಂಗ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ರಂಗ ಉತ್ಸವ ಕಾರ್ಯಕ್ರಮವನ್ನು ಹಿ.ಚಿ.ಬೋರಲಿಂಗಯ್ಯ ಉದ್ಘಾಟಿಸಿದರು. ಎಚ್.ಎಸ್‌. ಸುರೇಶ್ ಬಾಬು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಶಶಿಧರ್ ಭಾರಿಘಾಟ್ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಮೊಬೈಲ್ ಮತ್ತು‌ ಮಾದಕವಸ್ತು ಬಳಕೆಯ ವ್ಯಾಧಿಗೆ ಬಿಡುಗಡೆ ನೀಡುವ ಶಕ್ತಿ ಕಲಾಕ್ಷೇತ್ರಕ್ಕಿದೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಅಭಿಯಂತರರು ಸಂಸ್ಥೆಯಿಂದ 33ನೇ ವಾರ್ಷಿಕೋತ್ಸವ ಪ್ರಯುಕ್ತ ಇಲ್ಲಿ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ 5 ದಿನಗಳ ರಾಷ್ಟ್ರೀಯ ರಂಗ ಉತ್ಸವಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘ಬೆಂಗಳೂರಿನಲ್ಲಂತೂ ಮಾದಕದ್ರವ್ಯ ವ್ಯಸನಕ್ಕೆ ಅನೇಕ ಯುವಜನರು ಸಿಲುಕಿದ್ದಾರೆ. ಮೈಸೂರಿನಲ್ಲೂ ಡ್ರಗ್ಸ್‌ ತಯಾರಿಕಾ ಕೇಂದ್ರ ಪತ್ತೆಯಾಗಿರುವುದು ಆತಂಕಕಾರಿ. ಪೋಷಕರು ಮಕ್ಕಳನ್ನು ರಂಗಭೂಮಿ, ನೃತ್ಯ, ಸಂಗೀತ ಮುಂತಾದ ಕಲಾಕ್ಷೇತ್ರದಲ್ಲಿ ತೊಡಗಿಸುವ ಮೂಲಕ ಅವರನ್ನು ಇಂಥ ವ್ಯಸನದಿಂದ ದೂರವಿಡಬಹುದು. ಸಾಂಸ್ಕೃತಿಕ ಜೀವಿಯನ್ನಾಗಿ ಪರಿವರ್ತಿಸಬಹುದು’ ಎಂದರು.

ADVERTISEMENT

‘ಅಭಿಯಂತರರು ತಂಡ ವೃತ್ತಿಯ ಜೊತೆಗೆ ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ಸಮಾಜವನ್ನು ಭೌತಿಕ, ಬೌದ್ಧಿಕವಾಗಿ ಬೆಳೆಸುವ ಎಂಜಿನಿಯರ್‌ಗಳಿಗೆ ರಾಜಕೀಯ, ವೃತ್ತಿ ಜಂಜಾಟದಿಂದ ಹೊರಬರಲು ಇದೊಂದು ವೇದಿಕೆ. ರಂಗ ತಂಡ ಕಟ್ಟಿಕೊಂಡು ಸ್ವಯಂ ಬಿಡುಗಡೆಯೊಂದಿಗೆ ಸಮಾಜವನ್ನು ಬಿಡುಗಡೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ವೈದ್ಯರೂ ಇಂಥ ಕಾರ್ಯಕ್ಕೆ ಮುಂದಾಗಬೇಕು’ ಎಂದು ಆಶಿಸಿದರು.

ಶಿಕ್ಷಣದಲ್ಲಿ ರಂಗಭೂಮಿ ಅಗತ್ಯ: ‘ಶಾಲೆಗಳಲ್ಲಿ ನೃತ್ಯ, ಚಿತ್ರಕಲೆಗೆ ಶಿಕ್ಷಕರಿದ್ಧಾರೆ. ಆದರೆ, ರಂಗ ಶಿಕ್ಷಣಕ್ಕೆ ಇಲ್ಲವಾಗಿದೆ. ಸರ್ಕಾರವು ಪಠ್ಯಕ್ರಮದಲ್ಲಿ ರಂಗ ಶಿಕ್ಷಣ ಅಳವಡಿಸಬೇಕು. ರಂಗಭೂಮಿ ‌ಮತ್ತು ಜಾನಪದ ಕಲಾವಿದರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕು, ಶಿಕ್ಷಕರನ್ನಾಗಿ ನೇಮಿಸಬೇಕು’ ಎಂದರು.

ರಂಗಾಯಣ ರಂಗ ಸಮಾಜ ಸದಸ್ಯ ಶಶಿಧರ್ ಭಾರಿಘಾಟ್, ಅಭಿಯಂತರರು ಸಂಸ್ಥೆ ಅಧ್ಯಕ್ಷ ಎಚ್.ಎಸ್‌. ಸುರೇಶ್ ಬಾಬು ಇದ್ದರು. 

ಸಮಾಜದಲ್ಲಿ ಪ್ರಶ್ನಿಸುವ ಮನೋಭಾವ ಹೋರಾಟದ ಧ್ವನಿ ಕ್ಷೀಣವಾಗಿದೆ. ರಂಗಭೂಮಿಯಿಂದಾದರೂ ಜನರು ಜಾಗೃತರಾಗಲಿ
ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ

ಮೆಚ್ಚುಗೆ ಪಡೆದ ‘ರಾಮ– ಕೃಷ್ಣ– ಶಿವ’

ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಕರಾವಳಿಯ ನಿರ್ದಿಗಂತ ತಂಡವು ಪ್ರದರ್ಶಿಸಿದ ಲೋಹಿಯಾ ಲೇಖನಾಧಾರಿತ ‘ರಾಮ– ಕೃಷ್ಣ– ಶಿವ’ ನಾಟಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಲೋಹಿಯಾ ಅವರ ಚಿಂತನೆಯ ತಕ್ಕಡಿಯಲ್ಲಿ ತೂಗಿಸಿಕೊಂಡ ರಾಮ ಕೃಷ್ಣ ಶಿವರನ್ನು ರಂಗಭೂಮಿಯ ತಕ್ಕಡಿಯಲ್ಲೂ ಸಮರ್ಥವಾಗಿ ತೂಗಿಸಿದ ಕಲಾವಿದರು ಸೈ ಎನಿಸಿಕೊಂಡರು. ರಾಮನ ಕಥನಕ್ಕೆ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯ ಪದ್ಯಗಳನ್ನೂ ಬಳಸಿಕೊಂಡು ರಸಋಷಿಯ ಕಾವ್ಯ ಪ್ರೌಢಿಮೆಯನ್ನು ಪ್ರದರ್ಶಿಸುತ್ತಲೇ ಅಲ್ಲಿನ ನಿರೂಪಣೆಯನ್ನೂ ವಿಮರ್ಶಿಸಿದ ರೀತಿ ನೋಡುಗರನ್ನು ಚಿಂತನೆಗೆ ದೂಡಿತು. ನಟನೆ ಸಂಭಾಷಣೆಗೆ ಚಪ್ಪಾಳೆಯ ಸುರಿಮಳೆಯೂ ದೊರೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.