ADVERTISEMENT

ವಿದ್ಯಾರ್ಥಿಗಳಿಗೆ ಪಾಠ ಮಾಡಿದ ತಹಶೀಲ್ದಾರ್

ಹನಗೋಡು ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ್ದ ಐ.ಇ.ಬಸವರಾಜ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 8:44 IST
Last Updated 24 ಫೆಬ್ರುವರಿ 2020, 8:44 IST
ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಹಶೀಲ್ದಾರ್ ಐ.ಇ.ಬಸವರಾಜ್‌ ಮಕ್ಕಳಿಗೆ ಪಾಠ ಮಾಡಿದರು
ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಹಶೀಲ್ದಾರ್ ಐ.ಇ.ಬಸವರಾಜ್‌ ಮಕ್ಕಳಿಗೆ ಪಾಠ ಮಾಡಿದರು   

ಹನಗೋಡು: ಹುಣಸೂರು ತಹಶೀಲ್ದಾರ್ ಐ.ಇ.ಬಸವರಾಜ್ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬಸವರಾಜ್‌ ಅವರು ಈ ಹಿಂದೆ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಹೀಗಾಗಿ, ಬಿಡುವು ಸಿಕ್ಕಾಗ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಹನಗೋಡಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಬೋಧನೆ ಮಾಡಿದರು. ಇದರ ಜೊತೆಗೆ, ಸಾಧಕರ ಬಗ್ಗೆ ಹೇಳುವ ಮೂಲಕ ಮಕ್ಕಳಿಗೆ ಸ್ಫೂರ್ತಿ ತುಂಬಿದರು.

ADVERTISEMENT

ಹಳ್ಳಿಗಾಡಿನ ಮಕ್ಕಳು ದಡ್ಡರಲ್ಲ. ಕಷ್ಟಪಟ್ಟು ಓದಿದರೆ ಸಾಧನೆ ಮಾಡಬಹುದು. ಇದಕ್ಕಾಗಿ ಸಾಧಕರ ಕುರಿತ ಪುಸ್ತಕಗಳನ್ನು ಓದಬೇಕು. ಸ್ಪಷ್ಟ ಗುರಿ ಇರಬೇಕು. ಅದನ್ನು ಸಾಧಿಸಲು ಪರಿಶ್ರಮ ಪಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಸ್ವಚ್ಛತೆಗೂ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಬಸವರಾಜ್‌ ಅವರು ಶಾಲೆಗಳಿಗಲ್ಲದೆ, ಕಾಲೇಜುಗಳಿಗೂ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಮಾಹಿತಿ ನೀಡುತ್ತಿದ್ದಾರೆ.

ಪ್ರೌಢಶಾಲೆ ಮುಖ್ಯ ಶಿಕ್ಷಕಿ ಅಂಜಲಿ ಮತ್ತು ಶಿಕ್ಷಕರಾದ ಛಾಯಾಮಣಿ, ಹೊನ್ನಾಚಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.