ADVERTISEMENT

ಚಾಮುಂಡಿಬೆಟ್ಟ ಸಂರಕ್ಷಣೆಗೆ ಕ್ರಮವಹಿಸಿ: ಜಿ.ಟಿ.ದೇವೇಗೌಡಗೆ ವಿವಿಧ ಸಂಘಟನೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:56 IST
Last Updated 18 ಫೆಬ್ರುವರಿ 2026, 4:56 IST
ಚಾಮುಂಡಿ ಬೆಟ್ಟದ ಸಂರಕ್ಷಣೆಗೆ ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಚಾಮುಂಡಿ ಬೆಟ್ಟದ ಸಂರಕ್ಷಣೆಗೆ ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ‘ಪ್ರಸಾದ್‌ ಯೋಜನೆ’ ಅಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಪರಿಸರಕ್ಕೆ ಮಾರಕವಾಗಿದ್ದು,  ತುರ್ತು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. 

ಸಂಘಟನೆಯ ಪರಶುರಾಮೇಗೌಡ ಮಾತನಾಡಿ, ‘ಪ್ರಸಾದ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು. ಆಷಾಢ ಮಾಸದಲ್ಲಿ ಮಾಡುವಂತೆ ಖಾಸಗಿ ವಾಹನಗಳ ಓಡಾಟವನ್ನು ವರ್ಷ ಪೂರ್ತಿ ನಿಷೇಧಿಸಬೇಕು’ ಎಂದರು. 

‘ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್ ಜಾಗ ನಿರ್ಮಾಣ ಮಾಡಿ, ಎಲೆಕ್ಟ್ರಿಕ್‌ ಬಸ್ ಸೌಲಭ್ಯ ಕಲ್ಪಿಸಬೇಕು. ಬೆಟ್ಟದಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಅಲ್ಲಿನ ಕೆರೆ ಕಟ್ಟೆಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದ್ದು, ಸೂಕ್ತ ರೀತಿಯಲ್ಲಿ ವಿಲೇವಾರಿ ಆಗಬೇಕು’ ಎಂದು ಕೋರಿದರು. 

ADVERTISEMENT

ಪಿಯುಸಿಎಲ್‌ ಸಂಘಟನೆಯ ಕಮಲ್ ಗೋಪಿನಾಥ್, ‘ಚಾಮುಂಡಿ ಬೆಟ್ಟವನ್ನು ಪ್ರವಾಸಿ ತಾಣ ಮತ್ತು ವ್ಯಾಪಾರಿ ಕೇಂದ್ರ ಮಾಡಿ ಪ್ರವಾಸಿಗರನ್ನು ಸೆಳೆಯುವ ಅಗತ್ಯವಿದೆಯೇ? ಬೆಟ್ಟ ಬೆಟ್ಟವಾಗಿಯೇ ಉಳಿಯಬೇಕು. ಕಾಂಕ್ರೀಟ್‌ ಕಾಡು ಮಾಡುವ ಅವಶ್ಯಕತೆ ಇಲ್ಲ. ಭಕ್ತರಿಗೆ ಬೇಕಾದ ಸೌಲಭ್ಯವನ್ನು ಬೆಟ್ಟದ ಕೆಳಗೆಯೇ ಮಾಡಬಹುದಲ್ಲವೇ’ ಎಂದರು. 

ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು, ‘ಬೆಟ್ಟದ ಧಾರಣಾ ಸಾಮರ್ಥ್ಯ ಪರೀಕ್ಷೆ ನಡೆಸದೇ ಕಾಮಗಾರಿ ಕೈಗೊಳ್ಳಲಾಗಿದೆ. ಮಧುಗಿರಿ, ರಾಮನಗರದ ಬೆಟ್ಟಗಳಂತೆ ಗಟ್ಟಿ ಶಿಲೆಯ ಬೆಟ್ಟವಲ್ಲ. ಸಣ್ಣ, ಸಣ್ಣ ಕಲ್ಲು ಗುಡ್ಡೆಗಳಿಂದ ರಚನೆಯಾದ ಬೆಟ್ಟವಿದು. ಸಡಿಲ ಮಣ್ಣು ಹೊಂದಿದೆ. ಹೀಗಾಗಿ, ಅಭಿವೃದ್ಧಿ ಯೋಜನೆಗಳು ಬೇಕಿಲ್ಲ’ ಎಂದು ಹೇಳಿದರು. 

ಜಿಲ್ಲಾಧಿಕಾರಿಗೆ ಸೂಚನೆ:

‘ಚಾಮುಂಡಿ ಬೆಟ್ಟದ ಸಂರಕ್ಷಣೆಗಾಗಿ ಶಕ್ತಿ ಮೀರಿ ಕೆಲಸ ಮಾಡುವೆ. ಪರಿಸರ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಕೂಡಲೇ ಸೂಚಿಸುವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ‍ಪ್ರತಿಕ್ರಿಯಿಸಿದರು. 

ಮೈಸೂರು ಗ್ರಾಹಕ ಪರಿಷತ್ತಿನ ಭಾಮಿ ವಿ. ಶೆಣೈ, ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಕೆ.ಕಾಳಚನ್ನೇಗೌಡ, ಪ್ರಭಾ ನಂದೀಶ್,  ಲೀಲಾ ಶಿವಕುಮಾರ್, ಗಂಟಯ್ಯ, ಬಾನು ಪ್ರಶಾಂತ್, ಗೋಕುಲ್, ಗಾಯತ್ರಿ, ರಾಜೇಶ್, ವಿಶ್ವನಾಥ್, ಮಧುಶ್ರೀ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.