
ರಾಯಚೂರು: ‘ಪ್ರಸ್ತುತ ದೇಶದಲ್ಲಿ ಸಮಯ ಸಾಧಕತನ ಹೆಚ್ಚಾಗಿದೆ. ಸೈದ್ಧಾಂತಿಕ ರಾಜಕಾರಣಿಗಳು ಹಿನ್ನೆಲೆಗೆ ಸರಿಯುವ ವಾತಾವರಣ ಸೃಷ್ಟಿಯಾಗಿದೆ. ಸಮಯ ಸಾಧಕ ರಾಜಕಾರಣ ಮುನ್ನೆಲೆಗೆ ಬಂದಿದೆ. ಇದು ರಾಜಕೀಯದಲ್ಲಿ ಅಲ್ಲದೇ, ಸಮಾಜದ ಎಲ್ಲ ಸ್ತರಗಳಲ್ಲೂ ಕ್ರಿಯೆಯ ರೂಪದಲ್ಲಿ ಮುನ್ನೆಲೆಗೆ ಬಂದಿದೆ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಾರಾಟಕ್ಕೆ ಕಟ್ಟೆಗಳಿವೆ. ಆದರೆ ಮೌಲ್ಯಗಳಿಗೆ ಜಾಗವೇ ಇಲ್ಲದಂತಾಗಿದೆ. ಲಾಭ–ನಷ್ಟವನ್ನಷ್ಟೇ ಯೋಚಿಸುತ್ತಿದ್ದೇವೆ. ಜಾತಿಯ ಬೇರು ಬಲವಾಗಿ ಬಿಟ್ಟಿದೆ. ನಮ್ಮವರು ತಪ್ಪು ಮಾಡಿದರೂ ಪರವಾಗಿಲ್ಲ ಎನ್ನುವಂತಹ ಮನಸ್ಥಿತಿಗಳು ಬಂದಿವೆ. ದಲಿತರು, ದಲಿತೇತರರು ಹಾಗೂ ಪ್ರಗತಿಪರರು ಆತ್ಮಾವಲೋಕನ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಒಂದಂಶದ ಕಾರ್ಯಕ್ರಮದ ಮೂಲಕ ಪ್ರತಿಗಾಮಿಗಳು ಒಗ್ಗಟ್ಟಾಗಿದ್ದಾರೆ. ಪ್ರತಿಗಾಮಿಗಳಲ್ಲಿ ಇರುವಷ್ಟು ಒಗ್ಗಟ್ಟು ಪ್ರಗತಿಪರರಲ್ಲಿ ಕಾಣಿಸುತ್ತಿಲ್ಲ. ಇಂತಹ ಸಮ್ಮೇಳನಗಳು ಪ್ರಗತಿಪರರನ್ನು ಒಗ್ಗೂಡಿಸುವ ಸಮ್ಮೇಳನ ಆಗಬೇಕು’ ಎಂದು ಹೇಳಿದರು.
‘ಸಂವಿಧಾನವೇ ದೇಶದ ಧರ್ಮ ಗ್ರಂಥವಾಗಲಿ’: ‘ಸಂವಿಧಾನ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಹೀಗಾಗಿ ದೇಶದ ಧರ್ಮ ಗ್ರಂಥ ಸಂವಿಧಾನವೇ ಆಗಬೇಕು’ ಎಂದು ಸಮ್ಮೇಳನದ ಅಧ್ಯಕ್ಷೆ ಜಯದೇವಿ ಗಾಯಕವಾಡ ಪ್ರತಿಪಾದಿಸಿದರು.
‘ಸಂವಿಧಾನದಿಂದಲೇ ಪ್ರಭುಗಳಾದರೂ, ಬಹುತೇಕರು ಮಾತನಾಡುತ್ತಿಲ್ಲ. ಸಂವಿಧಾನ ಬದಲಾದರೆ ಮತ್ತೆ ವರ್ಣಾಶ್ರಮ ಜಾರಿಯಾಗುತ್ತದೆ. ಪ್ರಜಾಪ್ರಭುತ್ವ ಮಾಯವಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.