ರಾಯಚೂರು: ಕೊರೊನಾ ವೈರಸ್ ರೋಗ ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪರಿಶೀಲಿಸುವುದಕ್ಕಾಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ನಗರದ ವಿವಿಧೆಡೆ ಶುಕ್ರವಾರ ಭೇಟಿ ನೀಡಿದರು.
ಎನ್ಇಕೆಆರ್ಟಿಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಯು ನಿಗಾ ವಹಿಸಿರುವ ಕುರಿತು ಮಾಹಿತಿ ಪಡೆದರು. ಬಸ್ ನಿಲ್ದಾಣದ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸೂಕ್ತ ಸೂಚನೆಗಳನ್ನು ಕೊಡಬೇಕು. ನಿಲ್ದಾಣದಲ್ಲಿ ಶುಚಿತ್ವ ಕಾಪಾಡುವಂತೆ ಅಲ್ಲಿರುವ ಅಧಿಕಾರಿಗಳಿಗೆ ತಿಳಿಸಿದರು.
ಆನಂತರ, ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿರುವ ತಪಾಸಣಾ ಕೇಂದ್ರಗಳನ್ನು ಪರೀಕ್ಷಿಸಿದರು. ಥರ್ಮಾ ಸ್ಕ್ಯಾನರ್ನಿಂದ ಎಲ್ಲರನ್ನು ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹರಿಹರ ರಸ್ತೆಯ ಮಳಿಗೆಗಳನ್ನು ಬಂದ್ ಮಾಡಿರುವ ಕುರಿತು ಖುದ್ದಾಗಿ ವೀಕ್ಷಿಸಿದರು. ಔಷಧಿ, ಹಾಲು ಮಳಿಗೆಗಳು ಹಾಗೂ ಇನ್ನಿತರೆ ಅಗತ್ಯ ವಸ್ತುಗಳ ಅಂಗಡಿಗಳ ಹೊರತಾಗಿ ಎಲ್ಲವನ್ನು ಬಂದ್ ಮಾಡಿಸಬೇಕು ಎಂದು ತಿಳಿಸಿದರು.
ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತದ ಮಾರ್ಗಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಅಲ್ಲಿ ಕೆಲವು ಮಳಿಗೆಗಳು ತೆರೆದುಕೊಂಡಿದ್ದವು. ಕೂಡಲೇ ಸ್ಥಗಿತ ಮಾಡುವುದಕ್ಕೆ ಸೂಚನೆ ನೀಡಿದರಲ್ಲದೆ, ವ್ಯಾಪಾರ ಆರಂಭಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಿನ್ ಕಂದಿಲ್ ವೃತ್ತದಲ್ಲಿ ಬಹುತೇಕ ಅಂಗಡಿಗಳು ತೆರೆದುಕೊಂಡಿದ್ದವು. ಔಷಧಿ ಅಂಗಡಿ, ತರಕಾರಿ ಅಂಗಡಿ, ಕುಡಿಯುವ ನೀರಿನ ಘಟಕಗಳು, ಪೆಟ್ರೊಲ್ ಪಂಪ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಎನ್ನುಳಿದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಿದರು.
ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಆಸ್ಪತ್ರೆಗೆ ಭೇಟಿ ನೀಡಿದರು. ಕೊರೊನಾ ಶಂಕಿತ ರೋಗಿಗಳನ್ನು ದಾಖಲಿಸಲು ಸಜ್ಜುಗೊಳಿಸಿರುವ ಐಸೋಲೋಷನ್ ವಾರ್ಡ್ ಹಾಗೂ ಬೆಡ್ಗಳ ಸಂಖ್ಯೆಯನ್ನು ಗಮನಿಸಿದರು. ಓಪೆಕ್ ಆಸ್ಪತ್ರೆಗೆ ತೆರಳಿ, ಅಲ್ಲಿ ಕೊರೊನಾ ಶಂಕಿತರಿಗಾಗಿ ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ವಿಭಾಗದ ಮಾಹಿತಿ ಪಡೆದರು.
ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದರ್ ಹಂಪಣ್ಣ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.