ಸಿಂಧನೂರಿನ ನೂರಾನಿ ಮಸ್ಜೀದ್ ಮುಂದೆ ಈದ್ ಮಿಲಾದುನ್ನಬೀ ಅಂಗವಾಗಿ ಮೆರವಣಿಗೆಗೆ ಶಾಸಕ ಹಂಪನಗೌಡ ಬಾದರ್ಲಿ ಹಸಿರು ಧ್ವಜಸ್ತಂಭಕ್ಕೆ ಹೂವು ಮುಡಿಸುವ ಮೂಲಕ ಚಾಲನೆ ನೀಡಿದರು.
ಸಿಂಧನೂರು: ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಈದ್ ಮಿಲಾದ್ ಅಂಗವಾಗಿ
ಶುಕ್ರವಾರ ಮುಸ್ಲಿಮರು ಮಕ್ಕಾ–ಮದೀನಾ ಭಾವಚಿತ್ರ ಹಾಗೂ ಅಲ್ಲಾ ಹೆಸರಿನ ಸ್ತಬ್ಧ ಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.
ನಗರದ ಮಹಿಬೂಬಿಯಾ ಕಾಲೊನಿಯ ನೂರಾನಿ ಮಸೀದಿಯಲ್ಲಿ ಹಸಿರು ಧ್ವಜಸ್ತಂಭಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಹೂವು ಮುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಂಚರಿಸಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಕೋಟೆ ಪ್ರದೇಶದ ಕಿಲ್ಲಾ ಮಸೀದಿಯನ್ನು ತಲುಪಿತು. ಮೆರವಣಿಗೆಯಲ್ಲಿ ಮಕ್ಕಾ–ಮದೀನಾ, ಅಲ್ಲಾಹ್ ಹೆಸರಿನ ಸ್ತಬ್ಧ ಚಿತ್ರಗಳು, ಇಸ್ಲಾಂ ಧರ್ಮದ ಚಿಹ್ನೆಗಳುಳ್ಳ ಹಸಿರು, ಹಳದಿ, ಕಪ್ಪು, ಕೆಂಪು ಧ್ವಜಗಳು ಹಾರಾಡಿದವು. ಮುಸ್ಲಿಂ ಧರ್ಮಗುರುಗಳು, ವಾಹನದಲ್ಲಿ ಕುಳಿತು ಮೈಕ್ನಲ್ಲಿ ಪೈಗಂಬರ್ ಅವರ ಸಂದೇಶ ಸಾರಿದರು.
ಸಿಹಿ ವಿತರಣೆ: ಬಸ್ ನಿಲ್ದಾಣದ ಮೂಲಕ ಬಸವೇಶ್ವರ ವೃತ್ತ ತಲುಪುತ್ತಿದ್ದಂತೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಸದಸ್ಯರು ಮುಸ್ಲಿಮರಿಗೆ ಸಿಹಿ ತಿನ್ನಿಸಿ, ಶುಭಾಶಯ ಕೋರಿದರು. ಯುವಕರು ಪೈಗಂಬರರ ಕುರಿತಾದ ಧಾರ್ಮಿಕ ಸೌಹಾರ್ದ ಪುಸ್ತಕ ನೀಡಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ ಸದಸ್ಯರಾದ ಕೆ.ರಾಜಶೇಖರ, ಚಂದ್ರಶೇಖರ ಮೈಲಾರ, ಮಾಜಿ ಸದಸ್ಯ ಲಿಂಗರಾಜ ಹೂಗಾರ, ಜೆಡಿಎಸ್ ಮುಖಂಡ ಅಭಿಷೇಕ ನಾಡಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಸದಸ್ಯರಾದ ಸುರೇಶ ಹಚ್ಚೊಳ್ಳಿ, ರವಿಕುಮಾರ ಉಪ್ಪಾರ, ಜೀವನ್, ನಾಗರಾಜ ಬಾದರ್ಲಿ, ಮಹಾವೀರ ಜೈನ್, ಪಿ.ಶಿವು ಸುಕಾಲಪೇಟೆ, ಮಹಾದೇವ ನಾಯಕ, ಸಿಂಹಾದ್ರಿ, ಬೀರಪ್ಪ ಸಿಹಿ ಹಂಚಿ ಭಾವೈಕ್ಯತೆ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.