ADVERTISEMENT

ತಂತ್ರಾಂಶದಿಂದ ನೈಜ ಕೂಲಿಕಾರರಿಗೆ ಅನುಕೂಲ: ರೆಡ್ಡಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 12:17 IST
Last Updated 28 ಏಪ್ರಿಲ್ 2022, 12:17 IST
ಮಸ್ಕಿ ತಾಲೂಕಿನ ಕನ್ನಾಳ ಗ್ರಾಪಂ ವ್ಯಾಪ್ತಿಯ ವ್ಯಾಸನಂದಿಹಾಳದ ಕೆರೆಯ ಹೂಳು ಎತ್ತುವ ಕಾಮಗಾರಿಯನ್ನು ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಬುಧವಾರ ಪರಿಶೀಲಿಸಿದರು.
ಮಸ್ಕಿ ತಾಲೂಕಿನ ಕನ್ನಾಳ ಗ್ರಾಪಂ ವ್ಯಾಪ್ತಿಯ ವ್ಯಾಸನಂದಿಹಾಳದ ಕೆರೆಯ ಹೂಳು ಎತ್ತುವ ಕಾಮಗಾರಿಯನ್ನು ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಬುಧವಾರ ಪರಿಶೀಲಿಸಿದರು.   

ಮಸ್ಕಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಕೂಲಿ ಕಾರ್ಮಿಕರ ಹಾಜರಾತಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಎನ್ಎಂಎಂಎಸ್ ತಂತ್ರಾಂಶದಿಂದ ನೈಜ ಕೂಲಿಕಾರರಿಗೆ ಅನುಕೂಲವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ನರೇಗಾ) ಶಿವಾನಂದರೆಡ್ಡಿ ಹೇಳಿದರು.

ತಾಲೂಕಿನ ಕನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಸನಂದಿಹಾಳ, ಮಾರಲದಿನ್ನಿ ಜಲಾಶಯ, ಅಡವಿಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗ್ಗನಾಯಕನಭಾವಿ, ಬೆಲ್ಲದಮರಡಿ ಮುಂತಾದ ಗ್ರಾಮಗಳಲ್ಲಿ ಬುಧವಾರ ನರೇಗಾ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಮೇಟಿಗಳು ಕಡ್ಡಾಯವಾಗಿ ತಂತ್ರಾಂಶದಲ್ಲಿ ಕೂಲಿಕಾರರ ಹಾಜರಾತಿ ದಾಖಲಿಸಬೇಕು. ಕಾಮಗಾರಿ ಸ್ಥಳ ಗ್ರಾಮದಿಂದ 5 ಕಿ.ಮೀ. ದೂರ ಇದ್ದರೆ, ಪ್ರಯಾಣ ವೆಚ್ಚ ಭರಿಸಲಾಗುವುದು. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ನೆರಳು, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ADVERTISEMENT

ಕೂಲಿ ಮೊತ್ತ ಸಂಪೂರ್ಣ ಪಾವತಿಯಾಗಬೇಕಾದರೆ, ತಾಂತ್ರಿಕ ಸಹಾಯಕರು ನಿಗದಿಪಡಿಸಿದ ಅಳತೆ ಪ್ರಕಾರ ಕೆಲಸ ಪೂರ್ಣಗೊಳಿಸಬೇಕು. ಇಲ್ಲವಾದರೆ, ಕೂಲಿ ಮೊತ್ತ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅತ್ಯಂತ ಕಡಿಮೆ ಮೊತ್ತದ ಪಾಲಿಸಿಗಳಾಗಿದ್ದು, ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತಾಂತ್ರಿಕ ಸಹಾಯಕ ಸೋಮಶೇಖರ್, ವೀರಮ್ಮ, ಶಿವಪುತ್ರಪ್ಪ, ದುರಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.