ಕವಿತಾಳ: ‘ಮಸ್ಕಿ ತಾಲ್ಲೂಕಿನ ಅಮೀನಗಡ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ತೊಗರಿ ಖರೀದಿಗೆ ನೋಂದಾಯಿಸಲು ಪಾಮನಕಲ್ಲೂರು, ತೋರಣದಿನ್ನಿ ಮತ್ತು ಕವಿತಾಳದ ತೊಗರಿ ಖರೀದಿ ಕೇಂದ್ರಗಳಲ್ಲಿ ಅವಕಾಶ ನೀಡುತ್ತಿಲ್ಲ’ ಎಂದು ರೈತರು ದೂರಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರೈತರಾದ ಮಲ್ಲಪ್ಪ ನೆಲಕೊಳ, ಯಲ್ಲಪ್ಪ ಪೂಜಾರಿ ಮತ್ತು ಬಸಪ್ಪ ಅವರು, ’ಅಮೀನಗಡ, ಕಾಚಾಪುರ, ಯತಗಲ್ ಮತ್ತು ನೆಲಕೊಳ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಅಂದಾಜು 200 ಎಕರೆ ತೊಗರಿ ಬೆಳೆ ಬೆಳೆದಿದ್ದಾರೆ. ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ‘ ಎಂದು ದೂರಿದರು.
‘ಪಾಮನಕಲ್ಲೂರಿನ ಅಧಿಕಾರಿಗಳು, ತೋರಣದಿನ್ನಿಗೆ ಹೋಗುವಂತೆ, ತೋರಣದಿನ್ನಿಯ ಅಧಿಕಾರಿಗಳು ಕವಿತಾಳಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ಕವಿತಾಳದಲ್ಲಿ ಸದ್ರಿ ಹಳ್ಳಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ.
ಅಮೀನಗಡ ಗ್ರಾಮದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಅಥವಾ ಸಮೀಪದ ಖರೀದಿ ಕೇಂದ್ರದಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.