ADVERTISEMENT

ಬಿಜೆಪಿಯಿಂದ ಮೀಸಲಾತಿ ಕಸಿಯುವ ಹುನ್ನಾರ: ಎಚ್.ಆಂಜನೇಯ

ಮಾಜಿ ಸಚಿವ ಎಚ್.ಆಂಜನೇಯ ಆರೋಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 11:28 IST
Last Updated 8 ಏಪ್ರಿಲ್ 2021, 11:28 IST
ಮಸ್ಕಿ ಪಟ್ಟಣದ ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ಅವರ ಪರವಾಗಿ ಮಾಜಿ ಸಚಿವ ಎಚ್.ಆಂಜನೇಯ ಮತಯಾಚನೆ ಮಾಡಿದರು
ಮಸ್ಕಿ ಪಟ್ಟಣದ ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ಅವರ ಪರವಾಗಿ ಮಾಜಿ ಸಚಿವ ಎಚ್.ಆಂಜನೇಯ ಮತಯಾಚನೆ ಮಾಡಿದರು   

ಮಸ್ಕಿ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮೀಸಲಾತಿ ಕಸಿಯುವ ಹುನ್ನಾರ ಮಾಡುತ್ತಿದೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.

ಪಟ್ಟಣದ ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ವಿಮಾನ ನಿಲ್ದಾಣ ಸೇರಿದಂತೆ ಅನೇಕ ಸರ್ಕಾರಿ ವಲಯಗಳನ್ನು ಖಾಸಗೀಕರಣ ಮಾಡಿ ನಮ್ಮ ಜನರನ್ನು ಮೀಸಲಾತಿಯಿಂದ ವಂಚಿಸುವುದು ಬಿಜೆಪಿಯ ಮೂಲ ಗುರಿಯಾಗಿದೆ‘ ಎಂದು ದೂರಿದರು.

‘ಬಿಜೆಪಿ ಮುಖಂಡರು ಹೇಳೊದು ಒಂದು ಮಾಡೋದು ಮತ್ತೊಂದು, ಉಪ ಚುನಾವಣೆಯಲ್ಲಿ ನಿಮ್ಮ ಮನೆಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಬಂದರೆ ಅವರನ್ನು ಕರೆದುಕೊಳ್ಳಬೇಡಿ, ಅವರು ಆಸೆ, ಆಮೀಷಗಳನ್ನು ತೋರಿಸಿ ಮತ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ ಆಡಳಿತವಿದ್ದಾಗ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸಿದ್ದೇವು. ಆದರೆ, ಬಿಜೆಪಿ ಸರ್ಕಾರ ಕೆಆರ್‌ಡಿಐಎಲ್ ಸಂಸ್ಥೆಗೆ ಎರಡು ಕೋಟಿ ರೂಪಾಯಿವರೆಗೆ ಯಾವುದೇ ಟೆಂಡರ್ ಇಲ್ಲದೇ ಕಾಮಗಾರಿ ಗುತ್ತಿಗೆ ನೀಡಲು ಆದೇಶಿಸಿದ್ದು ಸರ್ಕಾರದ ಹಣ ಲೂಟಿ ಮಾಡಲು‘ ಎಂದರು.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ವಯಸ್ಸಾಗಿದೆ. ಅವರನ್ನು ವೃದ್ಧಾಶ್ರಮಕ್ಕೆ ಕಳಿಸಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಅವರನ್ನು ವಿಧಾನಸಭೆಗೆ ಕಳಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಮಾತನಾಡಿ, ‘ನನ್ನನ್ನು ಆಯ್ಕೆ ಮಾಡಿದರೆ ನನಗೆ ಮತ ನೀಡಿದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇನೆ. ಪ್ರತಾಪಗೌಡ ಪಾಟೀಲ ಅವರ ದಬ್ಬಾಳಿಕೆ ವಿರುದ್ಧ ನನ್ನ ಹೋರಾಟ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮುಖಂಡ ಎಚ್.ಬಿ.ಮುರಾರಿ, ಎ.ವಸಂತಕುಮಾರ, ದೊಡ್ಡಪ್ಪ ಮುರಾರಿ, ಪಾಮಯ್ಯ ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನಭಾವಿ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪೂರ, ಅಶೋಕ ಮುರಾರಿ, ದುರ್ಗರಾಜ್ ವಟಗಲ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಪರವಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

17 ರಂದು ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ತಕ್ಕ ಉತ್ತರ ನೀಡುವ ಮೂಲಕ ಪಕ್ಷಾಂತರಿಗಳಿಗೆ ಪಾಠ ಕಲಿಸುವ ಮೂಲಕ ಹೊಸ ಇತಿಹಾಸ ಬರೆಯಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಆದರೆ, ಅವರ ಆಟ ನಡೆಯುದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಸೇರಿದಂತೆ ಅನೇಕ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.