
ಮಾಗಡಿ: ತಾಲ್ಲೂಕಿನ ಜ್ಯೋತಿಪಾಳ್ಯದ ಅಜ್ಜಿ ಕಲಿಕಾ ಕೇಂದ್ರದಲ್ಲಿ ‘ನಮ್ಮ ಭೂಮಿ, ನಮ್ಮ ಭವಿಷ್ಯ’ ಧ್ಯೇಯವಾಕ್ಯದಡಿ ಛತ್ರಿಗಳ ಮೇಲೆ ಮಕ್ಕಳಿಂದ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
‘ನಮ್ಮ ಭೂಮಿ, ನಮ್ಮ ಭವಿಷ್ಯ’ ಎಂಬ ವಿಷಯ ಕುರಿತು 5 ರಿಂದ 15 ವರ್ಷ ವಯೋಮಾನದ ಮೂರು ಗುಂಪಿನ ಮಕ್ಕಳನ್ನು ಒಟ್ಟುಗೂಡಿಸಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಗದಕ್ಕಿಂತ ಭಿನ್ನವಾಗಿ ಛತ್ರಿಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಪರಿಸರ ಸಂರಕ್ಷಣೆ ಸಾಮೂಹಿಕ ಜವಾಬ್ದಾರಿಯನ್ನು ಸಾರುವುದು ಈ ಕಾರ್ಯಕ್ರಮದ ವಿಶೇಷವಾಗಿತ್ತು. 85ಕ್ಕೂ ಹೆಚ್ಚು ಸ್ಥಳೀಯ ಶಾಲೆ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಮ್ಮ ಬಣ್ಣ ಬಣ್ಣದ ಚಿತ್ರಗಳ ಮೂಲಕ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಲಿಕಾ ಕೇಂದ್ರದ ಟ್ರಸ್ಟಿ ಶಬ್ನಂ ಹಶ್ಮಿ ಮಾತನಾಡಿ, ತಮ್ಮ ಹಿರಿಯ ಸಹೋದರಿಯರ (ಮಕ್ಕಳು ಪ್ರೀತಿಯಿಂದ ‘ಅಜ್ಜಿ’ ಎಂದು ಕರೆಯುತ್ತಿದ್ದರು) ನೆನಪಿಗಾಗಿ ಈ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ‘ನಮ್ಮ ಭೂಮಿ, ನಮ್ಮ ಭವಿಷ್ಯ’ಎಂಬ ಧ್ಯೇಯದೊಂದಿಗೆ ಪರಿಸರದ ಮೇಲಾಗುತ್ತಿರುವ ದಾಳಿ ಬಗ್ಗೆ ಮತ್ತು ಭೂಮಿಯನ್ನು ಸಂರಕ್ಷಿಸುವ ಕುರಿತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಕೇಂದ್ರವು ಲಿಂಗ ತಾರತಮ್ಯ, ಮಾನಸಿಕ ಆರೋಗ್ಯ ಮತ್ತು ಪರಿಸರದಂತಹ ವಿಷಯಗಳ ಬಗ್ಗೆ ಕಲೆ ಮತ್ತು ನಾಟಕ ಮೂಲಕ ಮಕ್ಕಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ. ಸುತ್ತಮುತ್ತಲಿನ ಹಳ್ಳಿ ಮತ್ತು ಶಾಲೆಗಳ ಸುಮಾರು 86 ಮಕ್ಕಳು ಮತ್ತು ಕೆಲವು ತಾಯಂದಿರು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಮಾರ್ಚ್ 7ರಂದು ಮಹಿಳಾ ದಿನಾಚರಣೆ ಅಂಗವಾಗಿ ಪ್ರದರ್ಶಿಸಲಾಗುವುದು. ನಂತರ ಮಕ್ಕಳು ಆ ಛತ್ರಿಗಳನ್ನು ಮನೆಗೆ ಕೊಂಡೊಯ್ಯಬಹುದಾಗಿದೆ. ಮುಂಗಾರು ಮಳೆ ಸಮಯದಲ್ಲಿ ಮಕ್ಕಳು ಈ ಛತ್ರಿಗಳನ್ನು ಶಾಲೆಗೆ ತೆಗೆದುಕೊಂಡು ಹೋಗುವ ಆಶಯವಿದೆ ಎಂದು ತಿಳಿಸಿದರು.
ಕಲಿಕಾ ಕೇಂದ್ರದ ಶಿಕ್ಷಕಿ ಪಲ್ಲವಿ ಮಾತನಾಡಿ, ಅಜ್ಜಿ ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೆ ಹೆಚ್ಚು ಉಪಯೋಗವಾಗುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಛತ್ರಿಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮೂರು ವಿಭಾಗಗಳಿಂದ ಆಯ್ಕೆಯಾದ ಐದು ಅತ್ಯುತ್ತಮ ಚಿತ್ರಗಳಿಗೆ ಆರ್ಟ್ ಮೆಟಿರಿಯಲ್ (ಕಲಾ ಸಾಮಗ್ರಿ) ಬಹುಮಾನವಾಗಿ ನೀಡಲಾಗುವುದು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುತ್ತಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜ್ಜಿ ಕಲಿಕಾ ಕೇಂದ್ರದ ಸಿಬ್ಬಂದಿ ವರ್ಗ, ಮಕ್ಕಳು ಮತ್ತು ತೀರ್ಪುಗಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.