
ರಾಮನಗರ: ಮಹಾ ಶಿವರಾತ್ರಿ ಹಬ್ಬವನ್ನು ಶಿವಶಕ್ತಿಯ ಏಕತ್ವದ ಸಂಕೇತವಾಗಿ ಆಚರಿಸಲಾಗುತ್ತದೆ. ಈ ದಿನ ಧ್ಯಾನ, ಜಾಗರಣೆ ಹಾಗೂ ಶಿವನಾಮ ಸ್ಮರಣೆ ಮಾಡುವುದರಿಂದ ಆಂತರಿಕ ಶುದ್ಧಿ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಜಾಗೃತಿ ಲಭಿಸುತ್ತದೆ ಎಂದು ಮನಸಾಕ್ಷಿ ಗುರುಕುಲದ ಆಧ್ಯಾತ್ಮಿಕ ಗುರು ಡಾ. ಮಲ್ಲಿಕಾರ್ಜುನ ಕರಜಿಗಿಮಠ ಅಭಿಪ್ರಾಯಪಟ್ಟರು.
ಶಿವರಾತ್ರಿ ಪ್ರಯುಕ್ತ ಕಗ್ಗಲೀಪುರದಲ್ಲಿರುವ ಮಿಂಚುಳ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಶಿವೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವರಾತ್ರಿಯು ಆಧ್ಯಾತ್ಮಿಕ ಅರ್ಥದ ಜೊತೆಗೆ ವೈಜ್ಞಾನಿಕ ಕಾರಣಗಳನ್ನು ಸಹ ಹೊಂದಿದೆ. ಶಿವರಾತ್ರಿ ಧ್ಯಾನವು ಮನಸ್ಸಿಗೆ ವಿಶೇಷ ಚೈತನ್ಯವನ್ನು ನೀಡುತ್ತದೆ ಎಂದರು.
‘ಏಕಾಗ್ರತೆಯು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಮಕ್ಕಳಿಗಾಗಿ ನಾವು ರೂಪಿಸಿರುವ ತ್ರಿನೇತ್ರ ವಿದ್ಯಾ ಕಾರ್ಯಕ್ರಮವು ಏಕಾಗ್ರತೆ, ಸ್ಮರಣಶಕ್ತಿ ಹಾಗೂ ಆಂತರಿಕ ಶಕ್ತಿಯ ಜಾಗೃತಿ ಮೂಡಿಸುತ್ತದೆ. ವಯಸ್ಕರಿಗಾಗಿ ಆರಂಭಿಸಿದ ಶಿವಯೋಗ ಕಾರ್ಯಕ್ರಮವು ತೃತೀಯ ನೇತ್ರ (ಮೂರನೇ ಕಣ್ಣು) ಜಾಗೃತಿಯ ಮೂಲಕ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಗೆ ದಾರಿ ತೋರಿಸುತ್ತದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವ ಭಜನೆ, ಧ್ಯಾನ ಹಾಗೂ ಶಿವನಾಮ ಸ್ಮರಣೆ ಜರುಗಿತು. ವಿವಿಧ ಭಾಗಗಳಿಂದ ಭಕ್ತರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು. ಡಾ. ಸುರೇಶ್ ಚಿಕ್ಕಣ್ಣ, ಭವ್ಯ, ಪಾರ್ವತಿ, ಕುಸುಮ, ಮಂಜುನಾಥ್, ಆಕಾಶ್, ಪ್ರಥಮ್, ಅಣ್ಣಪ್ಪ, ಮಂಜುಶ್ರಿ ಹಾಗೂ ವೀರೇಶ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.