ADVERTISEMENT

ಶಿಕಾರಿಪುರ | ಹೋರಿ ಹಿಡಿಯುವ ಸ್ಪರ್ಧೆ: ಗೆಲ್ಲಲು ವಾಮ ಮಾರ್ಗ, ಅವಘಡಕ್ಕೆ ಹಾದಿ

ಶಿಕಾರಿಪುರ: ದೀಪಾವಳಿ ನಂತರ ಗರಿಗೆದರಿದ ಹೋರಿ ಹಿಡಿಯುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 22:47 IST
Last Updated 5 ನವೆಂಬರ್ 2025, 22:47 IST
ಶಿಕಾರಿಪುರದಲ್ಲಿ ಹೋರಿ ಹಿಡಿಯುವ ಸ್ಪರ್ಧೆಯ ನೋಟ (ಪ್ರಜಾವಾಣಿ ಸಂಗ್ರಹ ಚಿತ್ರ)
ಶಿಕಾರಿಪುರದಲ್ಲಿ ಹೋರಿ ಹಿಡಿಯುವ ಸ್ಪರ್ಧೆಯ ನೋಟ (ಪ್ರಜಾವಾಣಿ ಸಂಗ್ರಹ ಚಿತ್ರ)   

ಶಿಕಾರಿಪುರ: ದೀಪಾವಳಿ ಹಬ್ಬದ ಹಿಂದೆಯೇ ತಾಲ್ಲೂಕಿನಲ್ಲಿ ಹೋರಿ ಹಿಡಿಯುವ ಸ್ಪರ್ಧೆಯ ಗೌಜು ಗರಿಗೆದರಿದೆ. ಆದರೆ, ಬಹುಮಾನ ಗೆಲ್ಲಲು ಕೆಲವರು ಹೋರಿಗಳಿಗೆ ಗಾಂಜಾ ಸೊಪ್ಪು ತಿನ್ನಿಸಿ, ಮದ್ಯ ಕುಡಿ ಅಡ್ಡದಾರಿ ತುಳಿಯುತ್ತಿದ್ದಾರೆ. ಇದು ಅವಘಡಗಳಿಗೆ ದಾರಿಯಾಗುತ್ತಿದೆ. 

ಹೋರಿ ಹಿಡಿಯುವವರು, ಸಭಿಕರು ಗಾಯಗೊಳ್ಳುತ್ತಿದ್ದಾರೆ. ಸಾವುಗಳು ಸಂಭವಿಸಿವೆ. ವಾರದ ಹಿಂದಷ್ಟೇ ಬಳ್ಳಿಗಾವಿಯಲ್ಲಿ ಮಾಜಿ ಶಾಸಕ ಬಿ.ಎನ್‌. ಮಹಾಲಿಂಗಪ್ಪ ಹೋರಿ ತಿವಿತಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಪರ್ಧೆಗಾಗಿ ವರ್ಷದ ಮೊದಲೇ ಸಿದ್ಧತೆ ನಡೆಯುತ್ತದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಹೋರಿಗಳ ಖರೀದಿಸಿ ತಂದು ತರಬೇತಿ ನೀಡುತ್ತಾರೆ. ಉತ್ತಮ ಆಹಾರ, ಆರೈಕೆಯ ಮೂಲಕ ಸ್ಪರ್ಧೆಗೆ ಸಜ್ಜುಗೊಳಿಸುತ್ತಾರೆ.

ADVERTISEMENT

ಅವಘಡ ಏಕೆ?

‘ಹೋರಿ ಮದವೇರಿ ಮುನ್ನುಗ್ಗಿ ಜಯಗಳಿಸಲಿ ಎಂದು ಕೆಲವರು ಅದಕ್ಕೆ ಗಾಂಜಾ ಸೊಪ್ಪು ತಿನ್ನಿಸಿ ಉದ್ದೀಪಿಸುತ್ತಾರೆ. ಶಕ್ತಿ ವರ್ಧಕ ಪೇಯ, ಮದ್ಯ ಕೂಡ ಕುಡಿಸುತ್ತಾರೆ. ಅಖಾಡಕ್ಕಿಳಿಸುವ ಮುನ್ನ ಬ್ಯಾಟರಿ ಬಳಸಿ ಹೋರಿಗೆ ವಿದ್ಯುತ್ ಶಾಕ್ ಕೊಡಲಾಗುತ್ತಿದೆ. ಇದರಿಂದ ಅವು ನಿಯಂತ್ರಣ ತಪ್ಪಿ ಓಡುತ್ತವೆ. ಜನರ ಗುಂಪಿನತ್ತಲೂ ನುಗ್ಗುತ್ತವೆ’ ಎಂದು ಹೋರಿ ಮಾಲೀಕರೂ ಆದ ದಂತ ವೈದ್ಯ, ಶಿಕಾರಿಪುರದ ಪ್ರಶಾಂತ್ ಹೇಳುತ್ತಾರೆ.

‘ಹೋರಿ ಹಿಡಿಯುವ ಯುವಕರಲ್ಲೂ ಕೆಲವರು ಮದ್ಯದ ನಶೆಯಲ್ಲಿರುತ್ತಾರೆ. ಗೆದ್ದ ಹೋರಿಗೆ ದೊಡ್ಡ ಮೊತ್ತದ ಬಹುಮಾನ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಸಿಗುತ್ತದೆ. ಹೀಗಾಗಿ ಕೆಲವರು ಅಡ್ಡ ದಾರಿ ಹಿಡಿಯುತ್ತಿದ್ದಾರೆ’ ಎನ್ನುತ್ತಾರೆ.

ಅಖಾಡದ ಅಗಲ ಹೆಚ್ಚಬೇಕು:

‘ಸಣ್ಣ ರಸ್ತೆಯಲ್ಲಿ ಹೋರಿಗಳ ಓಡಿಸಲಾಗುತ್ತದೆ. ಬ್ಯಾರಿಕೇಡ್‌ ಹಾಕಿರುವುದಿಲ್ಲ. ಇದರಿಂದ ಹೋರಿಗಳು ಜನರತ್ತ ನುಗ್ಗುತ್ತವೆ. ಓಟದ ಅಖಾಡ ವಿಶಾಲವಾಗಿದ್ದರೆ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದು ಶಿಕಾರಿಪುರದ ಅರುಣ್ ದೂದಿಹಳ್ಳಿ ಹೇಳುತ್ತಾರೆ.

ಹೆಚ್ಚುತ್ತಿದೆ ಕ್ರೇಜ್:

‘ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಬಗ್ಗೆ ವ್ಯಾಪಕ ಪ್ರಚಾರದಿಂದ ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸ್ಪರ್ಧೆಯ ವೇಳೆ ಜನದಟ್ಟಣೆ ನಿಯಂತ್ರಣ ತಲೆನೋವಾಗುತ್ತಿದೆ’ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಾರೆ.

ಶಿಕಾರಿಪುರದಲ್ಲಿ ಹೋರಿ ಓಟದ ಸ್ಪರ್ಧೆಯ ನೋಟ (ಸಂಗ್ರಹ ಚಿತ್ರ)
ಹೋರಿ ಹಬ್ಬದತ್ತ ಯುವ ರೈತರ ಆಕರ್ಷಣೆ ಹೆಚ್ಚಾಗಿದೆ. ಆಯೋಜನೆಯಲ್ಲಿನ ತೊಡಕುಗಳನ್ನು ನಿವಾರಿಸಿ ಅಚ್ಚುಕಟ್ಟಾಗಿ ರೂಪಿಸಲು ಆಯೋಜಕರು ನಿಯಮಗಳನ್ನು ಪಾಲಿಸಬೇಕು
ಮಧು ಹೋತನಕಟ್ಟೆ ಹೋರಿ ಹಬ್ಬದ ಬೆಂಬಲಿಗ
ಹೋರಿಗಳಿಗೆ ಗಾಂಜಾ ಸೊಪ್ಪು ತಿನ್ನಿಸಿ ಮದ್ಯ ಕುಡಿಸುವ ಕ್ರೌರ್ಯ ತಡೆಯಲು ಪಶು ವೈದ್ಯರಿಂದ ನಿಯಮಿತ ಪರೀಕ್ಷೆಗೆ ನಿಯಮ ರೂಪಿಸಲಾಗಿದೆ. ಜಿಲ್ಲಾಡಳಿತದಿಂದಲೂ ಅನುಮತಿ ಪಡೆಯಬೇಕು
ಜಿ.ಕೆ.ಮಿಥುನ್‌ಕುಮಾರ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.