ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಅವರು ನಿಷ್ಠಾವಂತ ಕಾಂಗ್ರೆಸ್ಸಿಗರು ಎಂದು ಜಿಲ್ಲಾ ಪಂಚಾಯಿತಿ ಹಾಗೂ ಕೆಪಿಸಿಸಿ ಸದಸ್ಯ ಕೆಂಚಮಾರಯ್ಯ ನುಡಿದಿದ್ದಾರೆ.
ಪರಮೇಶ್ವರ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಕೆಲವರು ನಗರದ ವಿವಿಧ ಕಡೆಗಳಲ್ಲಿ ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ ಎಂದು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂದು ತಿಳಿಸಿದ್ದಾರೆ.
‘ಪರಮೇಶ್ವರ ಅವರ ಬಗ್ಗೆ ಜೀರೊ ಟ್ರಾಫಿಕ್ ಮಂತ್ರಿ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿರುವುದು ಅಸ್ಪೃಶ್ಯ ಸಮಾಜಕ್ಕೆ ಮಾಡಿರುವ ಅಕ್ಷಮ್ಯವಾದ ಅವಮಾನ. ಇದನ್ನು ಸಮಾಜದ ಮುಖಂಡನಾಗಿ ನಾನು ಖಂಡಿಸುತ್ತೇನೆ’ ಎಂದಿದ್ದಾರೆ.
ರಾಜಕಾರಣದ 70 ವರ್ಷದಲ್ಲಿಯೇ ಜಿಲ್ಲೆಯ ದಲಿತ ಸಮಾಜಕ್ಕೆ ಉನ್ನತ ಹುದ್ದೆ ದೊರೆತಿದೆ. ಈ ಹಿಂದಿನ ಹಲವು ಉಪಮುಖ್ಯಮಂತ್ರಿಗಳು ಶಿಷ್ಟಾಚಾರದ ಪ್ರಕಾರವಾಗಿಯೇ ನಡೆದುಕೊಂಡಿದ್ದಾರೆ. ಆದರೆ ಪರಮೇಶ್ವರ ಅವರನ್ನು ಮಾತ್ರ ಈ ವಿಚಾರದಲ್ಲಿ ಗುರಿ ಮಾಡಲಾಗಿದೆ. ಈ ಸಮಾಜಕ್ಕೆ ದೊರೆತಿರುವ ಉನ್ನತ ಹುದ್ದೆಯ ಬಗ್ಗೆ ಎಷ್ಟು ಅಸಹನೆ ಇದೆ ಎನ್ನುವುದನ್ನು ಇದು ಎತ್ತಿ ತೋರುತ್ತದೆ ಎಂದು ತೀಕ್ಷ್ಮವಾಗಿ ನುಡಿದಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇ ಬಿಜೆಪಿ ಬೆಂಬಲಿಸಿದವರನ್ನು ಮತ್ತು ದೇವೇಗೌಡರ ಸ್ಪರ್ಧೆಯ ಆರಂಭದಲ್ಲಿಯೇ ವ್ಯಂಗ್ಯವಾಡಿದವರನ್ನು ಮೊದಲು ಪಕ್ಷದಿಂದ ಹೊರಹಾಕಬೇಕು. ಜಿಲ್ಲೆಯಲ್ಲಿ ಅಂತಹವರನ್ನು ಪಕ್ಷದಿಂದ ಹಠಾವೋ ಮಾಡಿದರೆ ಮಾತ್ರ ಕಾಂಗ್ರೆಸ್ ಬಚಾವ್ ಆಗಲಿದೆ ಎಂದು ಹೇಳಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.