ADVERTISEMENT

ಮಾಧುಸ್ವಾಮಿ ವರ್ತನೆ | ಜೆಡಿಎಸ್, ಕಾಂಗ್ರೆಸ್‌‌ನಿಂದ ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:43 IST
Last Updated 21 ಮೇ 2020, 14:43 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ಕೋಲಾರ ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ ಅವರನ್ನು ‘ರ‍್ಯಾಸ್ಕಲ್’ ಎಂದು ನಿಂದಿಸಿರುವ ಕಾನೂನು ಮತ್ತು ಸಂಸದೀಯ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ವರ್ತನೆಗೆ ತವರು ಜಿಲ್ಲೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿವೆ.

ಮಾಧುಸ್ವಾಮಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಪಕ್ಷವು ಒತ್ತಾಯಿಸಲಿದೆ. ಒಂದು ವೇಳೆ ಸಚಿವ ಸ್ಥಾನದಿಂದ ವಜಾ ಮಾಡದಿದ್ದರೆ ಪಕ್ಷದ ವರಿಷ್ಠರು ಮತ್ತು ಮುಖಂಡರ ಜತೆ ಚರ್ಚಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್‌.ಸಿ.‌ಆಂಜಿನಪ್ಪ ಮತ್ತು ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ತಿಳಿಸಿದ್ದಾರೆ.

ADVERTISEMENT

ಹಿಂದೂ ಧರ್ಮ, ಸಂಸ್ಕೃತಿ ಎಂದು ಮಾತನಾಡುವ ಬಿಜೆಪಿ ಮತ್ತು ಆ ಪಕ್ಷದ ನಾಯಕರು, ಕಾರ್ಯಕರ್ತರು ಸಹ ಮಾಧುಸ್ವಾಮಿ ಅವರ ನಡೆಯನ್ನು ಖಂಡಿಸಬೇಕು. ಮತ ನೀಡುವವರೆಗೂ ಕಾಲು ಹಿಡಿದು ನಂತರ ಒದೆಯುವ ಜಾಯಮಾನ ಬಿಜೆಪಿ ನಾಯಕರದ್ದು ಎಂದು ಟೀಕಿಸಿದ್ದಾರೆ.

‘ಮಾಧುಸ್ವಾಮಿ ಅವರೇ ಹೇಳಿದಂತೆ, ಅವರು ಕೆಟ್ಟ ಮನುಷ್ಯನೇ ಸರಿ. ಅವರ ವರ್ತನೆ ಬಗ್ಗೆ ತುಮಕೂರು ಜಿಲ್ಲೆಯ ಜನರು ಮತ್ತು ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ತಾನು ಕಾನೂನು ಪಂಡಿತ ನನ್ನ ಬಿಟ್ಟು ಮಿಕ್ಕವರು ದಡ್ಡರು ಅನ್ನುವ ರೀತಿಯಲ್ಲಿ ವರ್ತಿಸುವರು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.