ADVERTISEMENT

ತುಮಕೂರು | ಹುಣಸೆ: ಸಂಸ್ಕರಣೆಯೇ ಸವಾಲು

ಕಾರ್ಮಿಕರ ಕೊರತೆ; ಮರದಲ್ಲೇ ಉಳಿದ ಹುಣಸೆ ಹಣ್ಣು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:28 IST
Last Updated 3 ಫೆಬ್ರುವರಿ 2026, 5:28 IST
ಹುಣಸೆ ಫಸಲು
ಹುಣಸೆ ಫಸಲು   

ತೋವಿನಕೆರೆ (ತುಮಕೂರು): ಜಿಲ್ಲೆಯಲ್ಲಿ ಹುಣಸೆ ಹಣ್ಣಿನ ಋತು ಆರಂಭವಾಗಿದ್ದು, ಸಂಸ್ಕರಣೆ ಮಾಡುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಮರದಿಂದ ಹಣ್ಣು ಕಿತ್ತು, ಸಂಸ್ಕರಿಸಿ ಮಾರುಕಟ್ಟೆಗೆ ಸಾಗಿಸುವುದೇ ದೊಡ್ಡ ತೊಡಕಾಗಿದೆ.

ಬರದ ನಾಡಿನ ವಾಣಿಜ್ಯ ಬೆಳೆ ಹುಣಸೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಉತ್ತಮ ಬೆಲೆಯೂ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗಬಹುದು ಎಂಬ ಖುಷಿಯಲ್ಲಿ ಇದ್ದಾರೆ. ಆದರೆ ಮರದಿಂದ ಹಣ್ಣು ಕೀಳಿಸುವುದು ತಲೆನೋವಾಗಿದ್ದು, ದಿಕ್ಕು ತೋಚದೆ ಕುಳಿತಿದ್ದಾರೆ.

ಮರದಿಂದ ಹಣ್ಣು ಕೀಳಿಸಲು ಪ್ರಮುಖರಾಗಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ. ರೈತರಿಂದ ಮರಗಳನ್ನು ಗುತ್ತಿಗೆ ಪಡೆದುಕೊಂಡವರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಅವರು ಹೊರಗಡೆಯಿಂದ ಇಲ್ಲವೆ ಸ್ಥಳೀಯವಾಗಿ ಕಾರ್ಮಿಕರನ್ನು ಕರೆತಂದು ಕೀಳಿಸುತ್ತಿದ್ದಾರೆ. ಮರ ಹತ್ತಿ ಹಣ್ಣು ಕೀಳುವ ಅನುಭವ ಇರುವ ರೈತರಿಗೂ ಹೆಚ್ಚಿನ ಸಮಸ್ಯೆ ಕಾಡುತ್ತಿಲ್ಲ. ಮರ ಹತ್ತಲು ಬಾರದವರು, ಹೆಚ್ಚಿನ ಸಂಖ್ಯೆಯ ಮರ ಹೊಂದಿದವರು, ಕಾರ್ಮಿಕರನ್ನೇ ಅವಲಂಬಿಸಿದವರು ಮರದಿಂದ ಹಣ್ಣು ಕೀಳಿಸಲಾರದೆ ಪರದಾಡುತ್ತಿದ್ದಾರೆ.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಮರ ಹತ್ತಿ ಹಣ್ಣು ಕೀಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಣ್ಣು ಕೀಳುವ ಸಮಯದಲ್ಲಿ ಮರದಿಂದ ಬಿದ್ದು ಕಾರ್ಮಿಕರು ಗಾಯಗೊಳ್ಳುವುದು, ಇಲ್ಲವೆ ಮೃತಪಟ್ಟ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಮೃತಪಟ್ಟವರಿಗೆ ನಿರೀಕ್ಷೆಗೂ ಮೀರಿದ ಪರಿಹಾರ ನೀಡಬೇಕಿದೆ ಎಂಬ ಕಾರಣಕ್ಕೆ ಕೆಲಸಕ್ಕೆ ಕಾರ್ಮಿಕರನ್ನು ಕರೆಯಲು ರೈತರು ಹಿಂದೆ–ಮುಂದೆ ನೋಡುವಂತಾಗಿದೆ.

ಬೇಸಿಗೆಯಲ್ಲಿ ಒಮ್ಮೆಲೆ ಹಣ್ಣು ಸಂಸ್ಕರಣೆ ಆರಂಭವಾಗುವುದರಿಂದ ಸಹಜವಾಗಿ ಕಾರ್ಮಿಕರ ಕೊರತೆ ಎದುರಾಗುತ್ತದೆ. ಮರದಿಂದ ಹಣ್ಣು ಕಿತ್ತರೆ ಉಳಿದ ಕೆಲಸಕ್ಕೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಮನೆಯವರೇ ಸೇರಿಕೊಂಡು ಸಿಪ್ಪೆ ತೆಗೆದು, ಬೀಜ ಬೇರ್ಪಡಿಸಿ ಮಾರಾಟಕ್ಕೆ ಹಣ್ಣು ಸಿದ್ಧಪಡಿಸುತ್ತಾರೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಸಂಸ್ಕರಿಸಿ ಮಾರಾಟ ಮಾಡಬೇಕಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ಹಣ್ಣು ಕಪ್ಪು ಬಣಕ್ಕೆ ತಿರುಗಲಿದ್ದು, ಉತ್ತಮ ಬೆಲೆ ಸಿಗುವುದಿಲ್ಲ. ಮುಂಗಾರಿಗೆ ಮುನ್ನ ಈ ಕೆಲಸ ಪೂರ್ಣಗೊಳಿಸಬೇಕಿದೆ. ಹೆಚ್ಚು ದಿನ ರೈತರು ತಮ್ಮ ಬಳಿ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಶೀತಲ ಘಟಕಗಳೂ ಇಲ್ಲ.

ಕಾರ್ಮಿಕರ ಕೊರತೆಯಿಂದಾಗಿ ಇನ್ನೂ ಶೇ 25ರಷ್ಟು ಮರಗಳಲ್ಲಷ್ಟೇ ಹಣ್ಣು ಕೀಳಿಸಲಾಗಿದೆ. ತೋವಿನಕೆರೆ ಸಮೀಪ 100ಕ್ಕೂ ಹೆಚ್ಚು ಮರಗಳಿರುವ ತೋಪನ್ನು ಮಾರಾಟ ಮಾಡಿದ್ದರು. ಗುತ್ತಿಗೆಗೆ ತೆಗೆದುಕೊಂಡವರು ಈವರೆಗೂ ಹಣ್ಣು ಕೀಳಿಸಲು ಮುಂದಾಗಿಲ್ಲ. ಈಗ ಅನಿವಾರ್ಯವಾಗಿ ಕೀಳಿಸಿ ಮಾರಾಟ ಮಾಡಬೇಕಿದೆ. ಇಲ್ಲವೆ ಮತ್ತೊಬ್ಬರಿಗೆ ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ 7 ಸಾವಿರ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಹುಣಸೆ ಬೆಳೆಯಲಾಗುತ್ತಿದ್ದು, ಸುಮಾರು 22 ಸಾವಿರ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆ ಆಗುತ್ತಿದೆ. ಪ್ರಸ್ತುತ ಕ್ವಿಂಟಲ್ ₹20 ಸಾವಿರದಿಂದ ₹30 ಸಾವಿರದ ವರೆಗೂ ಮಾರಾಟವಾಗುತ್ತಿದೆ.

ಹುಣಸೆ ಹಣ್ಣು
ಹುಣಸೆ ಹಣ್ಣು ಒಣಗಿಸುತ್ತಿರುವುದು
ಹುಣಸೆ ಹಣ್ಣು

ಅಭಿವೃದ್ಧಿ ಮಂಡಳಿ

ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಆ ಮೂಲಕ ಹುಣಸೆ ಬೆಳೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ರೈತರ ಬೇಡಿಕೆಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಹುಣಸೆ ಅಭಿವೃದ್ಧಿ ಮಂಡಳಿ ಆರಂಭಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಅದು ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಸಂಸ್ಕರಣೆ ಸವಾಲು

ಹುಣಸೆ ಹಣ್ಣಿನ ಸಂಸ್ಕರಣೆಗೆ ಈವರೆಗೂ ತಂತ್ರಜ್ಞಾನ ಅಭಿವೃದ್ಧಿಪಡಿಸಿಲ್ಲ. ಮನುಷ್ಯರೇ ಮರ ಹತ್ತಿ ಹಣ್ಣು ಕೀಳಬೇಕಿದ್ದು ಅದಕ್ಕಾಗಿ ಯಂತ್ರ ಅಭಿವೃದ್ಧಿಪಡಿಸಬೇಕು. ಕೃಷಿ ಕಾರ್ಮಿಕರ ಕೊರತೆ ಎದುರಾಗಿದ್ದು ಹಣ್ಣಿನ ಸಿಪ್ಪೆ ಬೀಜ ತೆಗೆದು ಸಂಸ್ಕರಿಸುವಂತಹ ಯಂತ್ರ ರೂಪುಗೊಳ್ಳಬೇಕು ಎಂಬುದು ರೈತರ ಬೇಡಿಕೆಯಾಗಿದೆ. ‘ಹಿಂದೆ ಸ್ವಲ್ಪಮಟ್ಟಿನ ಪ್ರಯತ್ನ ನಡೆದಿತ್ತು. ಈಗ ತುಮಕೂರಿನ ಮಹಿಳೆಯೊಬ್ಬರು ಇಂತಹ ಪ್ರಯತ್ನ ನಡೆಸಿದ್ದಾರೆ. ಇನ್ನೂ ಸ್ವಲ್ಪ ಮಟ್ಟಿಗೆ ಸುಧಾರಿಸಿದ ನಂತರ ರೈತರಿಗೆ ನೆರವಾಗಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಶಾಂತ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.