ತುರುವೇಕೆರೆ: ಲಾಕ್ಡೌನ್ನಿಂದ ತುಮುಲ್ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕಾರಣ ರೈತರಿಂದ ಖರೀದಿಸುವ ಹಾಲಿನದರ ಕಡಿತಗೊಳಿಸುವುದು ಅನಿವಾರ್ಯವಾಗಿತ್ತು ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ಪಟ್ಟಣದ ಹಿರಣ್ಣಯ್ಯ ರಂಗಮಂದಿರದ ಆವರಣದಲ್ಲಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಜರ್ಕಿನ್, ಫೇಸ್ ಶೀಲ್ಡ್, ಗ್ಲೌಸ್ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ನಿತ್ಯ 8.16 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಪ್ರಸ್ತುತ 4.46 ಲಕ್ಷ ಲೀಟರ್ಗೆ ಮಾತ್ರ ಮಾರುಕಟ್ಟೆ ಇದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ₹19 ಕೋಟಿ ನಷ್ಟವಾಗಿದೆ. ಮುಂದೆ ಒಕ್ಕೂಟ ನಷ್ಟಕ್ಕೀಡಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ನಿಂದಾಗಿ ಐದು ವಿಧದ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅರಿಸಿನ, ಶುಂಠಿ, ಏಲಕ್ಕಿ, ಅಶ್ವಗಂಧ ಹಾಗೂ ಕಾಳಮೆಣಸು ಒಳಗೊಂಡ ಬಾಟಲಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಬಿಸಿ ಅಥವಾ ತಂಪು ಮಾಡಿಯಾದರೂ ಕುಡಿಯಬಹುದಾಗಿದ್ದು, 5 ಬಾಟಲ್ ಹಾಲು ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲ್ಲೂಕಿನ 17 ರೈತರಿಗೆ ₹50 ಸಾವಿರದಂತೆ ₹8 ಲಕ್ಷ ಚೆಕ್ ನೀಡಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ವಿಸ್ತರಣಾಧಿಕಾರಿ ಮಂಜುನಾಥ್, ದಿವಾಕರ್, ಶಿವಣ್ಣ, ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.