ಲಕ್ಷ್ಮಿದೇವಮ್ಮ, ಎಸ್.ರಾಮಚಂದ್ರಯ್ಯ
ತುಮಕೂರು: ತುಮಕೂರು ತಾಲ್ಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಮಹಿಳೆಯ ಅಳಿಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರಿನ ‘ನಂಬರ್ ಪ್ಲೇಟ್’ ಅವರ ಪತ್ತೆಗೆ ದಾರಿ ತೋರಿದೆ.
ಕೊಲೆಯಾದ ಲಕ್ಷ್ಮಿದೇವಮ್ಮ ಅಳಿಯ, ನಗರದ ಕುವೆಂಪು ನಗರದ ನಿವಾಸಿ, ದಂತ ವೈದ್ಯ ಎಸ್.ರಾಮಚಂದ್ರಯ್ಯ (47), ಊರ್ಡಿಗೆರೆ ತಾಲ್ಲೂಕು ಕಲ್ಲಹಳ್ಳಿಯ ಕೆ.ಎನ್.ಸತೀಶ್ (38), ಕೆ.ಎಸ್.ಕಿರಣ್ (32) ಬಂಧಿತರು.
‘ಲಕ್ಷ್ಮಿದೇವಮ್ಮ ಅವರ ಎರಡನೇ ಮಗಳನ್ನು ರಾಮಚಂದ್ರಯ್ಯ 2019ರಲ್ಲಿ ಮದುವೆಯಾಗಿದ್ದ. ಇದು ರಾಮಚಂದ್ರಯ್ಯಗೆ ಎರಡನೇ ವಿವಾಹ. ಆ. 3ರಂದು ಮಗಳನ್ನು ನೋಡಲು ಲಕ್ಷ್ಮಿದೇವಮ್ಮ ನಗರಕ್ಕೆ ಬಂದಿದ್ದರು. ವಾಪಸ್ ಹೋಗುವಾಗ ಮನೆಗೆ ಬಿಡುತ್ತೇನೆ ಎಂದು ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇಲ್ಲಿ ಸೋಮವಾರ ತಿಳಿಸಿದರು.
‘ಸಾಕ್ಷಿ ನಾಶ ಪಡಿಸುವ, ಮೃತದೇಹದ ಗುರುತು ಸಿಗಬಾರದು ಎಂಬ ಉದ್ದೇಶದಿಂದ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ 19 ಕಡೆಗಳಲ್ಲಿ ದೇಹದ ಅಂಗಾಂಗ ಎಸೆದಿದ್ದರು. ಅಂಗಾಂಗ ಪತ್ತೆಯಾದ ನಂತರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದಾಗ ಹತ್ಯೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುದು ಖಚಿತವಾಯಿತು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತನ್ನ ಅತ್ತೆಯ ಚಟುವಟಿಕೆಗಳ ಬಗ್ಗೆ ರಾಮಚಂದ್ರಯ್ಯಗೆ ಅಸಮಾಧಾನವಿತ್ತು. ತನ್ನ ಹೆಂಡತಿಯನ್ನು ಸಹ ಕೆಟ್ಟ ಕೆಲಸಕ್ಕೆ ಬಳಸಿಕೊಂಡು ಹಾಳು ಮಾಡುತ್ತಾಳೆ ಎಂದು ಕೊಲೆ ಮಾಡಿರಬಹುದು ಎಂಬ ಸಂಶಯ ಇದೆ. ಹತ್ಯೆ ವಿಚಾರ ಬಹಿರಂಗಗೊಂಡ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆ ನಂತರ ರಾಮಚಂದ್ರಯ್ಯ, ಕಿರಣ್ ಜಿಲ್ಲೆಯಲ್ಲಿಯೇ ಇದ್ದರೂ, ಸತೀಶ್ ಹೊರನಾಡಿಗೆ ಹೋದಾಗ ಅಲ್ಲಿಯೇ ವಶಕ್ಕೆ ಪಡೆಯಲಾಯಿತು ಎಂದು ವಿವರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಗೋಪಾಲ್, ಎಂ.ಎಲ್.ಪುರುಷೋತ್ತಮ್, ಡಿವೈಎಸ್ಪಿಗಳಾದ ಮಂಜುನಾಥ್, ಬಿ.ಕೆ.ಶೇಖರ್, ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆರ್.ಪಿ.ಅನಿಲ್, ಸುರೇಶ್, ಕಾಂತರೆಡ್ಡಿ, ಹನುಮಂತರಾಯಪ್ಪ, ಅವಿನಾಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಿ.ಸಿ ಟಿ.ವಿ ಕ್ಯಾಮೆರಾ ನೆರವು
ಆರೋಪಿಗಳು ಲಕ್ಷ್ಮಿದೇವಮ್ಮ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ನಗರದಲ್ಲಿ ಸುತ್ತಾಡಿರುವುದು ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅದರ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಕಾರು ಸತೀಶ್ ಹೆಸರಿನಲ್ಲಿ ಇರುವುದು ಗೊತ್ತಾಗಿದೆ. ಮೊದಲು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಹೆಸರು ಬಾಯಿಬಿಟ್ಟಿದ್ದಾನೆ. ರಾಮಚಂದ್ರಯ್ಯ ವೈದ್ಯನಾಗಿದ್ದು ಸತೀಶ್ ಕಿರಣ್ ಈತನ ಬಳಿಗೆ ಪರೀಕ್ಷೆಗೆ ಬರುತ್ತಿದ್ದರು. ಆಗ ಪರಿಚಯವಾಗಿತ್ತು. ಮೂವರು ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು.
ನಗರದಲ್ಲೇ ಕೊಲೆ
ನಗರ ಭಾಗದಲ್ಲೇ ಕೊಲೆ ಮಾಡಿ ಮೃತದೇಹವನ್ನು ಕೋಳಾಲ ಬಳಿಯ ಸತೀಶ್ ತೋಟಕ್ಕೆ ತೆಗೆದುಕೊಂಡು ಹೋಗಿದ್ದರು. ಅಲ್ಲಿನ ಶೆಡ್ ಬಳಿ ಕಾರು ನಿಂತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಕೆ.ವಿ.ಅಶೋಕ್ ತಿಳಿಸಿದರು. ಶೆಡ್ನಲ್ಲಿ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿವಿಧೆಡೆ ಎಸೆದಿದ್ದರು ಎಂಬುದು ಗೊತ್ತಾಗಿದೆ. ಮತ್ತಷ್ಟು ವಿಚಾರಣೆ ನಂತರ ವಿವರಗಳು ಲಭ್ಯವಾಗಲಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.