ADVERTISEMENT

ಬೆಳಪು: ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:16 IST
Last Updated 20 ಜನವರಿ 2026, 2:16 IST
ಬೆಳಪು ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು
ಬೆಳಪು ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು   

ಪಡುಬಿದ್ರಿ: ಬೆಳಪು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ₹10 ಲಕ್ಷ ಅನುದಾನದಲ್ಲಿ ಬೆಳಪು ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ರಸ್ತೆ ಅಭಿವೃದ್ಧಿಗೆ ಸೋಮವಾರ ಶಾಸಕ ಗುರ್ಮೆ ಸುರೇಶ್‌ ಶೆಟ್ಟು ಗುದ್ದಲಿ ಪೂಜೆ ನೆರವೇರಿಸಿದರು.

ಅವರು ಮಾತನಾಡಿ, ಕಾಪು ಕ್ಷೇತ್ರದ ಬೆಳಪು ಗ್ರಾಮವು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಜಾತಿ, ಧರ್ಮ ನೋಡದೆ ಪಕ್ಷಾತೀತವಾಗಿ ಸುಮಾರು 800 ವಸತಿ ರಹಿತ ಬಡವರಿಗೆ ನಿವೇಶನ ನೀಡಿದ ಗ್ರಾಮವೆಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಕೆ.ಜಿ.ಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾಸಂಸ್ಥೆಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾರ್ಯಾರಂಭಗೊಂಡಿದೆ. ಮೌಲಾನಾ ಆಜಾದ್ ವಸತಿ ಶಾಲೆ ₹4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ತಿಳಿಸಿದರು.

ADVERTISEMENT

ಬೆಳಪು ರೈಲ್ವೇ ನಿಲ್ದಾಣದ ರಸ್ತೆ ಕಾಂಕ್ರಿಟೀಕರಣಕ್ಕೆ ₹40 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಅಲ್ಪಸಂಖ್ಯಾತ ನಿಗಮ ಯೋಜನೆಯಡಿ 10 ರಸ್ತೆಗಳ ಕಾಂಕ್ರಿಟೀಕರಣಕ್ಕೆ ಸಚಿವ ಜಮೀರ್ ಅಹಮದ್ ಅವರು ₹50 ಲಕ್ಷ ಮಂಜೂರುಗೊಳಿಸಿದ್ದಾರೆ. ಪಣಿಯೂರು ಆಯುಷ್ಮಾನ್ ಆಯುರ್ವೇದಿಕ್ ಆಸ್ಪತ್ರೆಯನ್ನು ₹48 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಬೆಳಪು ಸರ್ಕಾರಿ ಶಾಲೆ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ₹5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ. ₹2 ಲಕ್ಷ ಅನುದಾನದಲ್ಲಿ ಪ್ರಾಥಮಿಕ ಶಾಲೆಗೆ ಪೈಂಟಿಂಗ್ ಮಾಡಲಾಗುವುದು. ಪಣಿಯೂರು– ಬೆಳಪು ದ್ವಿಪಥ ರಸ್ತೆ ಅಭಿವೃದ್ಧಿಗೊಳಿಸಲು ಡಿಪಿಆರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಬಿ. ಭಟ್, ಸದಸ್ಯರಾದ ಸುಲೇಮಾನ್, ಶರತ್ ಕುಮಾರ್, ಪ್ರಕಾಶ್ ರಾವ್, ಸ್ಥಳೀಯ ಮುಖಂಡರಾದ ಬಾಲಕೃಷ್ಣ ಆಚಾರ್ಯ, ಬಿ. ಶಂಕರ್, ಅಬ್ದುಲ್ ರಜಾಕ್, ಜಹೀರ್ ಅಹಮದ್, ರಿಯಾಜ್ ಬೆಳಪು, ಗುತ್ತಿಗೆದಾರ ಸೌರಭ್ ಶೆಟ್ಟಿ, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.