ADVERTISEMENT

ರಾಮಧಾನ್ಯ ಚರಿತ್ರೆ ಭಕ್ತಿ ಕಾವ್ಯ: ವಿಸ್ತರಣಾ ಉಪನ್ಯಾಸ ಮಾಲಿಕೆ

ವಿಸ್ತರಣಾ ಉಪನ್ಯಾಸ ಮಾಲಿಕೆಯ ತೃತೀಯ ಉಪನ್ಯಾಸದಲ್ಲಿ ಪುತ್ತಿ ವಸಂತ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:43 IST
Last Updated 4 ಮಾರ್ಚ್ 2021, 15:43 IST
ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರ ಕೃತಿ ರಾಮಧಾನ್ಯ ಚರಿತ್ರೆ’ಯ ಕುರಿತು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಮಾತನಾಡಿದರು.
ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರ ಕೃತಿ ರಾಮಧಾನ್ಯ ಚರಿತ್ರೆ’ಯ ಕುರಿತು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಮಾತನಾಡಿದರು.   

ಉಡುಪಿ: ಕನಕದಾಸರು ಮಾನವತಾವಾದಿ ಹಾಗೂ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ದಾರ್ಶನಿಕ ಎಂದು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಹೇಳಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಾಹೆ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಸಹಯೋಗದಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರ ಕೃತಿ ರಾಮಧಾನ್ಯ ಚರಿತ್ರೆ’ಯ ಕುರಿತು ಮಾತನಾಡಿದರು.

ಕನಕದಾಸರು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುತ್ತಲೇ ಸಾಮಾನ್ಯ ಜನರಲ್ಲಿ ಆತ್ಮವಿಶ್ವಾಸ ತುಂಬಿದರು. ಹರಿದಾಸ ಪರಂಪರೆಯ ದೇವನಾಮ ಸ್ಮರಣೆಯ ಮಾರ್ಗ ಬದಲಾಯಿಸಿ ಸಾಮಾಜಿಕ ಕಳಕಳಿಯಿಂದ ಯಾರೂ ಶ್ರೇಷ್ಠರಲ್ಲ, ಯಾರೂ ಕೀಳಲ್ಲ ಎಂಬುದನ್ನು ಪ್ರತಿಪಾದಿಸಿದರು ಎಂದರು.

ADVERTISEMENT

ರಾಮಧಾನ್ಯ ಚರಿತ್ರೆಯಲ್ಲಿ ಉಳ್ಳವರ ಇಲ್ಲದವರ ಸಂಘರ್ಷದ ಚರ್ಚೆಯನ್ನು ಕಾಣಬಹುದು. ಧಾನ್ಯಗಳ ಮೂಲಕ ಆತ್ಮನಿವೇದನೆಯ ವಿಚಾರವನ್ನು ಕನಕದಾಸರು ಪ್ರಸ್ತಾಪಿಸಿದ್ದಾರೆ. ದಾಸರಿಗೆ ಯುಗಗಳ ಪರಿಕಲ್ಪನೆ ಇತ್ತಾದ್ದರಿಂದ ರಾಮಧಾನ್ಯ ಚರಿತ್ರೆ ಪೂರ್ಣ ಅಭಿವ್ಯಕ್ತಿಯ ಕೃತಿಯಾಗಿ ಮೂಡಿಬಂದಿದೆ. ಮಾನವತೆಯನ್ನು ಪ್ರತಿಪಾದಿಸುವ ಬರಹವಾಗಿದೆ ಎಂದರು.

ಅಧ್ಯಕ್ಷತೆಯನ್ನು ಕಾಪು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್ ಶೆಟ್ಟಿ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ ಬಿ ಜಗದೀಶ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಾನವಿಕ ವಿಭಾಗದ ಸಂಚಾಲಕಿ ಡಾ. ಸುಚಿತ್ರಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜು ವಿದ್ಯಾರ್ಥಿನಿಯರಿಂದ ಕನಕ ಕೀರ್ತನೆ ನಡೆಯಿತು. ಆಶಿಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.