ADVERTISEMENT

ಹಿಂದುತ್ವ ವಿಚಾರದಲ್ಲಿ ರಾಜಿ ಇಲ್ಲ: ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 15:26 IST
Last Updated 6 ಆಗಸ್ಟ್ 2021, 15:26 IST
ಸಚಿವ ವಿ. ಸುನೀಲ್ ಕುಮಾರ್
ಸಚಿವ ವಿ. ಸುನೀಲ್ ಕುಮಾರ್    

ಉಡುಪಿ: ಹಿಂದುತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ. ಹಿಂದುತ್ವವೇ ಮೊದಲ ಆಯ್ಕೆ, ಸಚಿವ ಹಾಗೂ ಶಾಸಕನ ಸ್ಥಾನ ನಂತರದ ಆಯ್ಕೆ ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಸಚಿವರಾದ ಬಳಿಕ ಶುಕ್ರವಾರ ಉಡುಪಿಗೆ ಆಗಮಿಸಿದ ಸಂದರ್ಭ ಮಾತನಾಡಿ, ಸಚಿವನಾಗಿ ಜಿಲ್ಲೆಗೆ ಬರುತ್ತಿರುವುದು ಸಂತೋಷ ಹಾಗೂ ಭಾವನಾತ್ಮಕ ಕ್ಷಣ. ಪಕ್ಷ ದೊಡ್ಡ ಹೊಣೆಗಾರಿಕೆ ನೀಡಿದೆ. ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯರು ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತೇನೆ. ಕೊಟ್ಟ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು.

ಎನ್‌ಐಎ ಕೇಂದ್ರ ಸ್ಥಾಪನೆಗೆ ಪ್ರಯತ್ನ:ಕರಾವಳಿ ಭಾಗದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್‌ಐಎ ಕೇಂದ್ರ ತೆರೆಯಬೇಕೆಂಬ ಒತ್ತಾಯವಿದ್ದು, ಈ ಸಂಬಂಧ ಕೇಂದ್ರ ಸಚಿವರು ಮತ್ತು ಸಂಸದರೊಂದಿಗೆ ಮಾತುಕತೆ ನಡೆಸುತ್ತೇನೆ. ಕರಾವಳಿಯಲ್ಲಿ ಶಾಶ್ವತ ಎನ್‌ಐಎ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸುತ್ತೇನೆ ಎಂದರು.

ADVERTISEMENT

ಕಾಂಗ್ರೆಸ್‌ನಲ್ಲಿ ಗೊಂದಲ:ಶಾಸಕ ಜಮೀರ್ ಅಹಮದ್ ನಿವಾಸದ ಮೇಲೆ ಇಡಿ ದಾಳಿಯಿಂದ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೇರೆ ಬೇರೆ ಗುಂಪುಗಳಾಗಿದ್ದು, ವೈರತ್ವ ಸಾಧಿಸುತ್ತಿವೆ ಎಂದರು.

ಹಾಲಾಡಿಗೆ ಸಿಗಲಿದೆ ಸ್ಥಾನಮಾನ:ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಹೆಚ್ಚು ಗೌರವ, ಸ್ಥಾನಮಾನ ಸಿಗಬೇಕು ಎಂಬ ನಿರೀಕ್ಷೆ ಸಹಜ. ಹಾಲಾಡಿಯವರನ್ನು ಪಕ್ಷ ಖಂಡಿತವಾಗಿ ಗುರುತಿಸಲಿದೆ. ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಅಂಗಾರ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಚರ್ಚೆ ನಡೆದಿಲ್ಲ. ನಳಿನ್ ಕುಮಾರ್ ಕಟೀಲ್ ಅವರೇ ಪಕ್ಷದ ಅಧ್ಯಕ್ಷರು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.