ಹಳಿಯಾಳ ತಾಲ್ಲೂಕಿನ ತೇಗನಳ್ಳಿ ಗ್ರಾಮದ ದೊಡ್ಡ ಕೆರೆಗೆ ಗ್ರಾಮಸ್ಥರು ಶ್ರಮದಾನದ ಮೂಲಕ ಒಡ್ಡು (ಕೋಡಿ) ನಿರ್ಮಿಸಿರುವುದರಿಂದ ಕೆರೆ ನೀರು ಭರ್ತಿಯಾಗಿ ಹೆಚ್ಚುವರಿ ನೀರು ಒಡ್ಡಿನ ಮೇಲ್ಭಾಗದಿಂದ ಸಾಗುತ್ತಿರುವುದು.
ಹಳಿಯಾಳ: ತಾಲ್ಲೂಕಿನ ತೇಗನಳ್ಳಿ ಗ್ರಾಮಸ್ಥರು ಗ್ರಾಮದ ಕೆರೆಯಲ್ಲಿ ನೀರು ನಿಲ್ಲಲು ಒಡ್ಡು ಹಾಗೂ ಮೀನು ಹೊರಹೋಗದಂತೆ ತಡೆಯಲು ಜಾಳಿಗೆ ನಿರ್ಮಿಸಿದ್ದು ಯಶಸ್ವಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ಮೀನು ಸಹ ಸುರಕ್ಷಿತವಾಗಿರುವುದು ಜನರ ಪ್ರಶಂಸೆಗೆ ಒಳಗಾಗಿದೆ.
ಚಿಬ್ಬಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಗನಳ್ಳಿ ಗ್ರಾಮದಲ್ಲಿ ಏಳುವರೆ ಎಕ್ಕರೆ ವಿಸ್ತೀರ್ಣವುಳ್ಳ ದೊಡ್ಡಕೆರೆ ಇದ್ದು ಮಳೆಗಾಲದಲ್ಲಿ ಮಾತ್ರ ಕೆರೆಯಲ್ಲಿ ನೀರು ನಿಲ್ಲುತ್ತಿದ್ದು ಉಳಿದ ದಿನಗಳಲ್ಲಿ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರು ಭತ್ತಿ ನೀರಿನ ಕೊರತೆಯಾಗಿ ಮೀನು ಸಹ ಸಾವನ್ನಪ್ಪುತಿದ್ದವು.
ನೀರಿನ ಕೊರತೆ ನೀಗಿಸಲು ಹಾಗೂ ನೀರು ಸಂರಕ್ಷಿಸಲು ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮ ದೇವಸ್ಥಾನದಲ್ಲಿ 2025ನೇ ಮೇ ತಿಂಗಳಿನಲ್ಲಿ ಸಭೆಯನ್ನು ನಡೆಸಿ ಗ್ರಾಮಸ್ಥರೆಲ್ಲರೂ ಸೇರಿ ವಾರದ ಪ್ರತಿ ಮಂಗಳವಾರದಂದು ಪ್ರತಿ ಮನೆಗೆ ಓರ್ವರಂತೆ ಶ್ರಮದಾನದ ಮೂಲಕ ಕೆರೆಗೆ ಒಡ್ಡು ಕಟ್ಟುವುದು ಹಾಗೂ ಮೀನುಗಳು ಹೊರಹೋಗದಂತೆ ತಡೆಯಲು ಒಡ್ಡಿನ ಉದ್ದಕ್ಕೂ ಜಾಳಿಗೆ ನಿರ್ಮಿಸಿದರು.
ಜಾಳಿಗೆಯು ಒಡ್ಡಿನಿಂದ 12 ಅಡಿ ಎತ್ತರದವರೆಗೆ ನಿರ್ಮಿಸಲಾಗಿದೆ. ಕಳೆದ ತಿಂಗಳು ಇದೆ ಕೆರೆಯಲ್ಲಿ ₹80 ರಿಂದ ₹90 ಸಾವಿರ ವೆಚ್ಚ ಮಾಡಿ ಹೊಸಪೇಟೆ ಹಾಗೂ ಮತ್ತಿತರ ಭಾಗಗಳಿಂದ ಮೀನಿನ ಮರಿಗಳನ್ನು ಸಹ ಬಿಡಲಾಗಿತ್ತು. ಈಗ ಆ ಮೀನಿನ ಮರಿಗಳು ಸಹ ಬೆಳೆದಿವೆ. ಕೆರೆಯ ಒಡ್ಡಿಗೆ ಜಾಳಿಗೆ ನಿರ್ಮಿಸಿರುವುದರಿಂದ ಮೀನುಗಳು ಸಹ ಕೆರೆ ತುಂಬಿ ನೀರಿನ ಜೊತೆಗೆ ಹೊರ ಹೋಗದಂತೆ ಕೆರೆಯಲ್ಲಿಯೇ ಪೋಷಣೆ ಆಗುತ್ತಿವೆ.
ಕೆರೆಯು ಸಂಪೂರ್ಣ ಭರ್ತಿಯಾಗಿದ್ದು ಹೆಚ್ಚಿನ ಪ್ರಮಾಣದ ನೀರು ಅಷ್ಟೇ ಹೊರ ಸಾಗುತ್ತಿದೆ. ಕೆರೆ ಭರ್ತಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮಳೆ ಕಡಿಮೆಯಾದರೂ ಕೂಡ ಕೆರೆಯ ಆಸು ಪಾಸಿನಲ್ಲಿ ಇರುವ ನೂರಾರು ಎಕರೆ ಜಮೀನುಗಳು ತೇವಾಂಶದಿಂದ ಕೂಡಿದ್ದು ಉತ್ತಮ ಬೆಳೆಯು ಸಹ ಬೆಳೆಯಲು ಸಾಧ್ಯತೆ ಇದೆ. ಅಲ್ಲದೆ ಕೆರೆಯಲ್ಲಿಯ ಮೀನುಗಳು ಸಹ ಬೆಳವಣಿಗೆ ಹೊಂದಿದ್ದು ಮೀನಿನ ಮಾರಾಟದಿಂದ ಬಂದ ಹಣವನ್ನು ಮತ್ತೆ ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು.
’ಮೂರು ವರ್ಷಗಳಿಂದ ಗ್ರಾಮಸ್ಥರೆಲ್ಲರೂ ಸೇರಿ ಶ್ರಮದಾನದ ಮೂಲಕ ಗ್ರಾಮದ ರಸ್ತೆ ಸುಧಾರಣೆ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿದೆ. ಕಳೆದ ವರ್ಷ ನರೇಗಾ ಯೋಜನೆ ಅಡಿ ಕೆರೆ ಅಭಿವೃದ್ಧಿ ಕೆಲಸ ನಡೆದಿತ್ತು’ ಎಂದು ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾರಾಯಣ ಬಿಷ್ಟಪ್ಪ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.