ಹೊಸಪೇಟೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಿಂದ ವಾಲ್ಮೀಕಿ ಜಯಂತಿ ಆಚರಣೆ
ಹೊಸಪೇಟೆ (ವಿಜಯನಗರ): ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಕುರುಬ ಸಮುದಾಯವನ್ನು ಸೇರಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿದ ಇಲ್ಲಿನ ವಾಲ್ಮೀಕಿ ನಾಯಕ ಸಮಾಜದವರು ಮಂಗಳವಾರ ಸರ್ಕಾರದ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಪ್ರತ್ಯೇಕವಾಗಿ ಜಯಂತಿ ಆಚರಿಸಿದರು.
ಇಲ್ಲಿನ ಸಂಡೂರು ರಸ್ತೆಯ ತಾಲ್ಲೂಕು ಪಂಚಾಯಿತಿಕಚೇರಿ ಬಳಿಕ ವಾಲ್ಮೀಕಿ ನಾಯಕ ಸಮಾಜದ ಮೂಲ ಸ್ಥಳ ಇದ್ದು, ಅಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಸಹಿತ ಕೇರಿಗಳ ಯಜಮಾನರು ಪಾಲ್ಗೊಂಡು ವಾಲ್ಮೀಕಿ ಜಯಂತಿ ಆಚರಿಸಿದರು.
ವಿವಿಧ ಕೇರಿಗಳಲ್ಲಿ, ಗರಡಿಮನೆಗಳಲ್ಲಿ ಆಯಾ ಕೇರಿಯವರು ವಾಲ್ಮೀಕಿ ಜಯಂತಿ ಆಚರಿಸುವಂತೆ ಮುಖಂಡರು ಸೂಚನೆ ನೀಡಿದ್ದರು. ಹೀಗಾಗಿ ಸಮಾಜದವರು ತಮ್ಮ ಮನೆಗಳ ಸಮೀಪದಲ್ಲೇ ಒಟ್ಟುಸೇರಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ಭಕ್ತಿಭಾವ ಮೆರೆದರು.
ಗುರುಗಳ ಬೆಂಬಲ ದೊಡ್ಡ ಶಕ್ತಿ: ‘ಸರ್ಕಾರದ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ನಾವು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಲ್ಲಿ ಕೇಳಿಕೊಂಡಿದ್ದೆವು. ನಮ್ಮ ಭಾವನೆಗೆ ಸ್ಪಂದಿಸಿ ಅವರು ಬೆಂಗಳೂರಿಗೆ ಹೋಗದೆ ಇದ್ದುದು ನಮ್ಮ ಹೋರಾಟಕ್ಕೆ ಬಹುದೊಡ್ಡ ಶಕ್ತಿ ದೊರೆತಂತಾಗಿದೆ. ಮುಖ್ಯವಾಗಿ ಹೊಸಪೇಟೆಯಿಂದಷ್ಟೇ ಶ್ರೀಗಳಿಗೆ ಇಂತಹ ಒತ್ತಾಯ ಮಾಡಲಾಗಿತ್ತು, ಅದಕ್ಕೆ ಅವರು ಸ್ಪಂದಿಸಿದ್ದಾರೆ. ಮುಂದಿನ ನಮ್ಮ ಹೋರಾಟ ತೀವ್ರಗೊಳ್ಳುವುದು ನಿಶ್ಚಿತ’ ಎಂದು ದೇವರಮನೆ ಶ್ರೀನಿವಾಸ್ ಬಳಿಕ ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರಿ ಕಾರ್ಯಕ್ರಮ: ವಾಲ್ಮೀಕಿ ನಾಯಕ ಸಮಾಜದವರ ಬಹಿಷ್ಕಾರದ ಕಾರಣ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ಸರಳವಾಗಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಇತರರು ಪಾಲ್ಗೊಂಡಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು ಒಬ್ಬರೂ ಪಾಲ್ಗೊಳ್ಳದ ಕಾರಣ ಇದು ಕೇವಲ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡ ಕಾರ್ಯಕ್ರಮವಾಗಿ ದಾಖಲಾಯಿತು.
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.