ಹೊಸಪೇಟೆ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿಜಯನಗರ ಜಿಲ್ಲೆಯಲ್ಲಿ ಶೇ 88.25ರಷ್ಟು ಪೂರ್ಣಗೊಂಡಿದ್ದು, ರಾಜ್ಯದ ಒಟ್ಟಾರೆ ಸಮೀಕ್ಷೆಯ ಪಟ್ಟಿಯಲ್ಲಿ ಜಿಲ್ಲೆ 16ನೇ ಸ್ಥಾನದಲ್ಲಿದೆ.
ಸದ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ ಸರಾಸರಿ ಸಮೀಕ್ಷೆ ಪ್ರಮಾಣ ಶೇ 82.20ರಷ್ಟಿದೆ. ತುಮಕೂರು ಜಿಲ್ಲೆ ಶೇ 97.25 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಧಾರವಾಡ ಜಿಲ್ಲೆ ಶೇ 80.90ರಷ್ಟು ಸಮೀಕ್ಷೆ ಪೂರ್ಣಗೊಳಿಸಿ ಕೊನೆಯ ಅಂದರೆ 31ನೇ ಸ್ಥಾನದಲ್ಲಿದೆ. ಬಳ್ಳಾರಿ ಜಿಲ್ಲೆ ಶೇ 82.08ರಷ್ಟು ಸಾಧನೆಯೊಂದಿಗೆ 30ನೇ ಸ್ಥಾನದಲ್ಲಿದೆ.
‘ಜಿಲ್ಲೆಯಲ್ಲಿ ಆರಂಭದಲ್ಲಿ ಸಮೀಕ್ಷೆ ವೇಗ ಪಡೆದಿತ್ತು. ಹೊಸಪೇಟೆ ತಾಲ್ಲೂಕು ಸ್ವಲ್ಪ ಹಿಂದೆ ಬಿದ್ದಿತ್ತು. ಇದೀಗ ಹೊಸಪೇಟೆ ತಾಲ್ಲೂಕು ಶೇ 86.44ರಷ್ಟು ಸಾಧನೆ ಮಾಡಿದ್ದರೆ, ಕೂಡ್ಲಿಗಿ ಶೇ 81.07 ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅ.31ರವರೆಗೆ ಸಮೀಕ್ಷೆ ಅವಧಿ ವಿಸ್ತರಿಸಲಾಗಿದೆ. ಇದೀಗ ಶಿಕ್ಷಕರನ್ನು ನಿಯೋಜಿಸದೆ ಇತರ ಸಿಬ್ಬಂದಿಯಿಂದಲೇ ಉಳಿದ ಸಮೀಕ್ಷೆ ಪೂರ್ಣಗೊಳಿಸಲಾಗುವುದು’ ಎಂದು ಅವರು ಹೇಳಿದರು.
14.91 ಲಕ್ಷ ಜನರಿಂದ ಮಾಹಿತಿ: ಜಿಲ್ಲೆಯಲ್ಲಿ 3,48,463 ಕುಟುಂಬಗಳು ಇವೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಬಳಿಕ ಯುಎಚ್ಐಡಿ ಸ್ಟಿಕರ್ ಅಂಟಿಸದೆ ಇರುವ ಮನೆಗಳೂ ಸಾಕಷ್ಟು ಇರುವುದು ತಿಳಿದುಬಂದಿತ್ತು. ಹೀಗಾಗಿ ಇದುವರೆಗೆ 3,51,477 ಮನೆಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. 3,122 ಬ್ಲಾಕ್ಗಳ ಪೈಕಿ 3,113 ಬ್ಲಾಕ್ಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. 68,495 ಯುಎಚ್ಐಡಿಗಳನ್ನು ರದ್ದುಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16,90,090 ಜನರಿದ್ದಾರೆ ಎಂಬ ಅಂದಾಜು ಮಾಡಲಾಗಿದ್ದು, ಇದುವರೆಗೆ 14,91,512 ಜನರ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಡಳಿತದ ಅಂಕಿ ಅಂಶಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.