ADVERTISEMENT

PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಏಳೆಂಟು ವರ್ಷದಿಂದ ನಡೆಯುತ್ತಿದೆ ಮೇಲ್ಸೇತುವೆ ಕಾಮಗಾರಿ

ಪ್ರಜಾವಾಣಿ ವಿಶೇಷ
Published 4 ಮಾರ್ಚ್ 2026, 0:30 IST
Last Updated 4 ಮಾರ್ಚ್ 2026, 0:30 IST
   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ-ಆನೇಕಲ್‌ ಮುಖ್ಯರಸ್ತೆಯ ಬಳ್ಳೂರು ಕ್ರಾಸ್‌ನಲ್ಲಿ ಕೆಆರ್‌ಐಡಿಸಿಎಲ್‌ ಸಂಸ್ಥೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಏಳೆಂಟು ವರ್ಷಗಳೇ ಕಳೆದರೂ ಪಿಲ್ಲರ್‌ಗಳನ್ನು ಹೊರತುಪಡಿಸಿ ಬೇರೆ ಇನ್ನಾವುದೇ ಕಾಮಗಾರಿ ಇನ್ನೂ ಶುರುವಾಗಿಯೇ ಇಲ್ಲ! 

ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೆಆರ್‌ಐಡಿಸಿಎಲ್‌ ಸಂಸ್ಥೆ ರಸ್ತೆ ಮಧ್ಯೆ ಅನೇಕ ಬೃಹದಾಕಾರದ ಪಿಲ್ಲರ್‌ಗಳನ್ನು ಹಾಕಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ನಿಂತು ಹಲವು ವರ್ಷಗಳೇ ಕಳೆದಿವೆ. ಮರದ ದೊಡ್ಡ ರೆಂಬೆ ಆಕಾರದ ಪಿಲ್ಲರ್‌ಗಳು ಸುಗಮ ಸಂಚಾರಕ್ಕೆ ತಡೆಯಾಗುತ್ತಿವೆ. ಅತ್ತಿಬೆಲೆ ಮುಖ್ಯ ರಸ್ತೆಯಲ್ಲಿನ ದ್ವಿಪಥ ರಸ್ತೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಬರಲು ವಾಹನ ಸವಾರರು  ಪ್ರತಿನಿತ್ಯ ಪರದಾಡುವಂತಾಗಿದೆ. ಪ್ರತಿದಿನ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲು ಸಾಮಾನ್ಯವಾಗಿದೆ.

ಬಳ್ಳೂರು ಕ್ರಾಸ್‌ನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಅನಾವಶ್ಯಕವಾಗಿ ಈ ಪಿಲ್ಲರ್‌ಗಳು ಸಂಚಾರಕ್ಕೆ ಕಿರಿಕಿರಿ ಮಾಡುತ್ತಿವೆ. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಅಪಘಾತಗಳು ಹೆಚ್ಚಾಗುತ್ತಿವೆ. ಒಂದು ವಾರದಲ್ಲಿ ಬಳ್ಳೂರು ಕ್ರಾಸ್‌ನಲ್ಲಿಯೇ ಮೂರಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ರಸ್ತೆ ಬದಲಿಸಲು ಹೋಗಿ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕೆಲಸಕ್ಕೆ ಬಾರದ ಈ ಪಿಲ್ಲರ್‌ಗಳನ್ನು ತೆರವುಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ. 

ADVERTISEMENT

ಪಿಲ್ಲರ್‌ ಹಾಕಿ ಕೈಬಿಟ್ಟರು.ಪಿಲ್ಲರ್‌ಗಳು ಚಲನಚಿತ್ರಗಳು, ಕಾರ್ಯಕ್ರಮಗಳ ಪೋಸ್ಟರ್‌ ಅಂಟಿಸುವ ಸ್ಥಳಗಳಾಗಿವೆ ಎನ್ನುತ್ತಾರೆ ಸ್ಥಳಿಯ ನಿವಾಸಿ ವಸಂತ್‌. 

ಅತ್ತಿಂದಿತ್ತ ಬರುವಾಗ ವಾಹನಗಳು ಕಾಣುವುದಿಲ್ಲ. ಯಾವುದಕ್ಕೂ ಉಪಯೋಗಕ್ಕೆ ಬಾರದ ಪಿಲ್ಲರ್‌ಗಳನ್ನು ತೆರವುಗೊಳಿಸಿ ಎನ್ನುವುದು ವಾಹನ ಸವಾರ ಮನೋಜ್‌ ಸಲಹೆ. 

ಕೆಆರ್‌ಐಡಿಸಿಎಲ್‌ ಪೂರ್ವ ಸಿದ್ಧತೆಯಿಲ್ಲದೇ ಅವೈಜ್ಞಾನಿಕವಾಗಿ ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಿತು. ಆದರೆ  ಕಾಮಗಾರಿ ಪೂರ್ಣಗೊಳ್ಳದೇ ಪಿಲ್ಲರ್‌ ಹಂತದಲ್ಲಿಯೇ ಉಳಿದಿದೆ. ಪಿಲ್ಲರ್‌ಗಳ ನಿರ್ಮಾಣಕ್ಕೆ ₹25 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ, ಇವು ಉಪಯೋಗಕ್ಕೆ ಬಾರದೇ ಇರುವುದರಿಂದ ಸಾರ್ವಜನಿಕರ ತೆರಿಗೆ ಹಣ  ಪೋಲಾಗಿದೆ. ಪಿಲ್ಲರ್‌ಗಳಿಗೆ ಬಳಸಿರುವ ಕಬ್ಬಿಣ ತುಕ್ಕು ಹಿಡಿಯಲು ಆರಂಭಿಸಿದೆ
–ಸತೀಶ್‌, ವಕೀಲ
ಕಿರಿದಾದ ರಸ್ತೆ ಅತ್ತಿಬೆಲೆಯ ಬಳ್ಳೂರು ಕ್ರಾಸ್‌ನಿಂದ ಅರ್ಧ ಕಿ.ಮೀ.ಗೂ ಹೆಚ್ಚು ಪಿಲ್ಲರ್‌ಗಳನ್ನು ಹಾಕಲಾಗಿದೆ. ಇದರಿಂದಾಗಿ ರಸ್ತೆಯ ಕಾಲು ಭಾಗ ಕಂಬಗಳಿಂದ ತುಂಬಿದೆ. ದ್ವಿಪಥದ ರಸ್ತೆ ಕಿರಿದಾಗಿದ್ದು ಪಿಲ್ಲರ್‌ಗಳನ್ನು ತೆರವುಗೊಳಿಸಬೇಕು ಅಥವಾ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ಪರದಾಡಬೇಕಾಗುತ್ತದೆ. ವಾಹನ ಸವಾರರು ಪಿಲ್ಲರ್‌ಗಳಿಗೆ ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ.
-ವೆಂಕಟೇಶ್,ಎಳನೀರು ವ್ಯಾಪಾರಿ, ಬಳ್ಳೂರು ಕ್ರಾಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.