ADVERTISEMENT

PV Web Exclusive: ಕ್ಯಾಬಿನೆಟ್ ಅಂಗಳಕ್ಕೆ 'ಸೈಕ್ಲಿಂಗ್ ವೆಲೋಡ್ರೋಮ್‌'

ಆರ್.ಜಿತೇಂದ್ರ
Published 23 ಫೆಬ್ರುವರಿ 2026, 1:30 IST
Last Updated 23 ಫೆಬ್ರುವರಿ 2026, 1:30 IST
<div class="paragraphs"><p>ಸೈಕ್ಲಿಂಗ್ ಟ್ರ್ಯಾಕ್‌ (ಸಾಂಕೇತಿಕ ಚಿತ್ರ: ಪಿಟಿಐ)</p></div>

ಸೈಕ್ಲಿಂಗ್ ಟ್ರ್ಯಾಕ್‌ (ಸಾಂಕೇತಿಕ ಚಿತ್ರ: ಪಿಟಿಐ)

   

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ ಸನ್ನಿಹಿತವಾಗಿದ್ದು, ಯೋಜನೆಗೆ ಅವಶ್ಯವಾದ ಭೂಮಿ ಹಸ್ತಾಂತರಕ್ಕೆ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಂದಿನ ಬಜೆಟ್‌ನಲ್ಲಿ ತವರೂರಿನಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣದ ಘೋಷಣೆ ಮಾಡಿದ್ದರು. ಆದಾಗ್ಯೂ ನಾನಾ ಕಾರಣಗಳಿಂದ ಅದು ಕಾರ್ಯಗತ ಆಗಲು ವಿಳಂಬ ಆಗಿತ್ತು. ಇದೀಗ ಕ್ರೀಡಾಂಗಣಕ್ಕೆ ಬೇಕಾದ ಜಾಗವೂ ಫೈನಲ್ ಆಗಿದ್ದು, ಸಚಿವ ಸಂಪುಟದ ಮುಂದೆ ಪ್ರಸ್ತಾವ ಸಲ್ಲಿಸುವಂತೆ ಎಂಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಲ್ಲಿ ಹಸಿರುನಿಶಾನೆ ದೊರೆತಲ್ಲಿ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ.

ADVERTISEMENT

ಏನಿದು ವೆಲೋಡ್ರೋಮ್‌: ಸೈಕ್ಲಿಸ್ಟ್‌ಗಳ ಅಭ್ಯಾಸಕ್ಕೆ ಅನುಕೂಲಕರವಾದ ಇಳಿಜಾರುಗಳುಳ್ಳ, ವೃತ್ತಾಕಾರದ ವಿನ್ಯಾಸದ ಅಭ್ಯಾಸದ ಅಂಕಣವನ್ನು ವೆಲೋಡ್ರೋಮ್ ಎಂದು ಕರೆಯಲಾಗುತ್ತದೆ. ರಾಜ್ಯದ ಮೊಟ್ಟಮೊದಲ ವೆಲೋಡ್ರೋಮ್ ಅಂಕಣವನ್ನು ವಿಜಯಪುರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವರ್ಷ ಜನವರಿಯಲ್ಲಿ ಉದ್ಘಾಟಿಸಿದ್ದರು. ಇದೀಗ ಮೈಸೂರಿನಲ್ಲೂ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯುವ ನಿರೀಕ್ಷೆ ಇದೆ.

ಜಾಗದ ಲಭ್ಯವಿಲ್ಲದ ಕಾರಣಕ್ಕೆ ಕ್ರೀಡಾಂಗಣ ನಿರ್ಮಾಣಕ್ಕೆ ಹಿನ್ನಡೆ ಆಗಿತ್ತು. ಸದ್ಯ ಜಿಲ್ಲಾಡಳಿತವು ಮೈಸೂರು ನಗರ ವ್ಯಾಪ್ತಿಯ ಹಂಚ್ಯ–ಸಾತಗಳ್ಳಿ ಬಳಿ 17 ಎಕರೆ 20 ಗುಂಟೆಯಷ್ಟು ಜಾಗವನ್ನು ವೆಲೋಡ್ರೋಮ್‌ಗಾಗಿ ಗುರುತಿಸಿದೆ. ಸದ್ಯ ಈ ಜಾಗವು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿದೆ. ಈ ಮೊದಲು ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿತ್ತು. ಇಲ್ಲಿನ ಒಟ್ಟು 20 ಎಕರೆ ಜಾಗವನ್ನೂ ಜಿಲ್ಲಾಡಳಿತ ಗೊತ್ತು ಮಾಡಿತ್ತು. ಆದರೆ ಇದರಲ್ಲಿನ ಎರಡು ಎಕರೆಯಷ್ಟು ಪ್ರದೇಶ ಕೆರೆಗೆ ಸೇರಿದ್ದರಿಂದ ಕ್ರಿಕೆಟ್ ಮೈದಾನ ನಿರ್ಮಾಣ ಸಾಧ್ಯವಾಗಲಿಲ್ಲ. ಇದೀಗ ಕೆರೆ ಬಫರ್ ಝೋನ್‌ ಬಿಟ್ಟು ಉಳಿದ ಜಾಗವನ್ನು ವೆಲೋಡ್ರೋಮ್ ನಿರ್ಮಾಣಕ್ಕೆ ನೀಡಲು ಯೋಜಿಸಲಾಗಿದೆ. ಸರ್ಕಾರವು ಸಮ್ಮತಿಸಿದಲ್ಲಿ ನಗರಾಭಿವೃದ್ಧಿ ಇಲಾಖೆಯು ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಿದೆ.

ಒಟ್ಟು ₹10 ಕೋಟಿ ವೆಚ್ಚದಲ್ಲಿ ವೆಲೋಡ್ರೋಮ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಸರ್ಕಾರವು ಈಗಾಗಲೇ ಅನುದಾನ ನೀಡಿದ್ದು, ಜಾಗ ಮಂಜೂರು ಮಾಡಿದಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ’ ಎನ್ನುತ್ತಾರೆ ಕ್ರೀಡಾ ಇಲಾಖೆಯ ಮೈಸೂರು ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್.

ಕ್ರೀಡಾಪಟುಗಳಿಗೆ ಅನುಕೂಲ: ರಾಜ್ಯ ಸೈಕ್ಲಿಂಗ್ ಇತಿಹಾಸದ ಪುಟ ತೆರೆದು ನೋಡಿದರೆ ಅಲ್ಲಿ ವಿಜಯಪುರ–ಬಾಗಲಕೋಟೆ ಜಿಲ್ಲೆಗಳ ಸೈಕ್ಲಿಸ್ಟ್‌ಗಳದ್ದೇ ಪಾರಮ್ಯ. ಪ್ರತಿ ಸ್ಪರ್ಧೆಗಳಲ್ಲೂ ಅವರೇ ಪ್ರಶಸ್ತಿ ಗೆಲ್ಲುತ್ತ ಬಂದಿದ್ದಾರೆ. ಅವರ ನಂತರದಲ್ಲಿ ಮೈಸೂರು ಭಾಗದ ಸೈಕ್ಲಿಸ್ಟ್‌ಗಳು ಇದ್ದಾರೆ.

ಇಲ್ಲಿಯೂ ಕ್ರೀಡಾವಸತಿ ನಿಲಯ ಹಾಗೂ ವಿವಿಧ ಕ್ರೀಡಾ ಕ್ಲಬ್‌ಗಳಿದ್ದು, ಆಗಾಗ್ಗೆ ಸ್ಪರ್ಧೆಗಳು ನಡೆಯುತ್ತ ಬಂದಿವೆ. ವೆಲೋಡ್ರೋಮ್‌ ನಂತಹ ಸೌಲಭ್ಯ ಸಿಕ್ಕಲ್ಲಿ ಆಟಗಾರರಿಗೆ ಇನ್ನಷ್ಟು ವೃತ್ತಿಪರ ತರಬೇತಿ ಸಾಧ್ಯವಾಗಲಿದೆ. ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಬಹುದಾಗಿದೆ ಎನ್ನುತ್ತಾರೆ ಇಲ್ಲಿನ ಸೈಕ್ಲಿಂಗ್ ತರಬೇತುದಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.