ADVERTISEMENT

ಯಾದಗಿರಿ: ಅಸರ್ ಮೊಹಲ್ಲಾ ಸೀಲ್‍ಡೌನ್

ಸುರಪುರದ ಇಬ್ಬರಿಗೆ ಕೋವಿಡ್‌–19, ಆತಂಕದಲ್ಲಿದ್ದ ಜನತೆ ಧೈರ್ಯ ತುಂಬಿದ ಶಾಸಕ

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:15 IST
Last Updated 12 ಮೇ 2020, 16:15 IST
ಶಾಸಕ ರಾಜೂಗೌಡ ಸುರಪುರ ಪಟ್ಟಣದ ಅಸರ್ ಮೊಹಲ್ಲಾಕ್ಕೆ ಭೇಟಿ ನೀಡಿದರು
ಶಾಸಕ ರಾಜೂಗೌಡ ಸುರಪುರ ಪಟ್ಟಣದ ಅಸರ್ ಮೊಹಲ್ಲಾಕ್ಕೆ ಭೇಟಿ ನೀಡಿದರು   

ಸುರಪುರ: ಪಟ್ಟಣದ ಅಸರ್ ಮೊಹಲ್ಲಾದಲ್ಲಿ ಇಬ್ಬರಿಗೆ ಕೋವಿಡ್‌–19 ಪತ್ತೆಯಾದ ಪರಿಣಾಮ ತಾಲ್ಲೂಕಿನ ಜನತೆಯಲ್ಲಿ ಆತಂಕ, ಭೀತಿ ಉಂಟು ಮಾಡಿದೆ.

ಇದರಿಂದ ಆ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ. ನಗರಾದ್ಯಂತ ಕೊರೊನಾ ಸೋಂಕಿನ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಎಲ್ಲೆಡೆ ಇದೇ ಚರ್ಚೆಗಳು ಜೋರಾಗಿವೆ.

ಮಂಗಳವಾರ ಜಿಲ್ಲಾಧಿಕಾರಿ ಆದೇಶ ಮಾಡಿದ್ದರಿಂದಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ನಗರದ ರಸ್ತೆಗಳು ಬೀಕೋ ಎನ್ನುತ್ತಿತ್ತು. ಕೆಲ ಬಡಾವಣೆಗಳ ಜನರು ತಮ್ಮ ತಮ್ಮ ಬಡಾವಣೆಗಳಲ್ಲಿ ಮುಳ್ಳು, ತಂತಿ ಬೇಲಿ ಹಾಕಿ ರಸ್ತೆ ಮುಚ್ಚಿಸಿ ಬಿಟ್ಟಿದ್ದಾರೆ. ಗ್ರಾಮೀಣ ಜನರು ನಗರಕ್ಕೆ ಬಂದಿಲ್ಲ.

ADVERTISEMENT

ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ: ಶಾಸಕ ರಾಜೂಗೌಡ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದರು. ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರಿಗೆಆತಂಕ ಪಡೆದಂತೆಧೈರ್ಯತುಂಬಿದರು. ಮಾಸ್ಕ್, ಅಂತರ ಕಾಪಾಡುಕೊಳ್ಳುವಿಕೆ, ಸ್ವಚ್ಛತೆ ಪಾಲಿಸುವಂತೆ ಸಲಹೆ ನೀಡಿದರು.

ಕೊರೊನಾ ತಡೆಯಲು ಸಿದ್ಧ: ‘ಪಟ್ಟಣದ ಇಬ್ಬರಿಗೆ ಕೋವಿಡ್‌–19 ದೃಢವಾಗಿದ್ದು,ತಾಲ್ಲೂಕಿನ ಜನತೆ ಭಯಪಡುವ ಅವಶ್ಯವಿಲ್ಲ. ಇದನ್ನು ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ’ ಎಂದುಎಂದು ಶಾಸಕ ರಾಜೂಗೌಡ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುಜರಾತಿನ ಅಹಮದಾಬಾದ್‍ನಿಂದ ಬಂದ ಇಬ್ಬರಿಗೆ ಕೋವಿಡ್‌–19ಇರುವ ಬಗ್ಗೆ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಯಾದಗಿರಿಯ ಜಿಲ್ಲಾಸ್ಪತ್ರೆಯ ಕೋವಿಡ್ ರೂಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ತಾಲ್ಲೂಕಿನ ಜನತೆ ಭಯಪಡಬೇಡಿ. ಕೊರೊನಾ ಸೋಂಕಿನ ಅಪಾಯ ತಡೆಯಲು ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸರ್ವ ರೀತಿಯಿಂದಲೂ ಸಿದ್ಧವಾಗಿದೆ’ ಎಂದರು.

***

ಬೇರೆ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರನ್ನು ನೇರವಾಗಿ ಜ್ವರ ತಪಾಸಣೆ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ನಡೆಸಿ ಕ್ವಾರಂಟೈನ್‌ಗಳಲ್ಲಿ ಇಡಲಾಗಿದೆ

- ರಾಜೂಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.