ADVERTISEMENT

ಕೊಲೆ ಯತ್ನ: ಮೂವರಿಗೆ 6 ತಿಂಗಳು ಜೈಲು ಶಿಕ್ಷೆ‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:50 IST
Last Updated 30 ಡಿಸೆಂಬರ್ 2025, 7:50 IST
   

ಯಾದಗಿರಿ: ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದ ಸಾಬೀತು ಆಗಿದ್ದರಿಂದ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ತಾಲ್ಲೂಕಿನ ವರ್ಕನಳ್ಳಿ ತಾಂಡಾದ ನಿವಾಸಿಗಳಾದ ಬಲರಾಮಸಿಂಗ್ ಪವಾರ್, ಯಂಕುಬಾಯಿ ಪವಾರ್ ಹಾಗೂ ಲಲಿತಾ ಪವಾರ್ ಶಿಕ್ಷೆಗೆ ಒಳಗಾದ ಅಪರಾಧಿಗಳು.

ಪ್ರಕರಣ ಒಂದರಲ್ಲಿ ವಕಾಲತ್ತು ನಡೆಸಿದ ‌ವಕೀಲ ಗೋಪಾಲ ರಾಠೋಡ ಅವರು ಕೋರ್ಟ್‌ನಿಂದ ಹೊರಗೆ ತೆರಳಿದ್ದರು. ವಕೀಲರನ್ನು ತಡೆದು ನಿಲ್ಲಿಸಿದ ಈ ಮೂವರು, ನಿಂದಿಸಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರು.

ADVERTISEMENT

ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌‌ಐ ಮಹಾಂತೇಶ ಸಜ್ಜನ್ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾದ–ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಈರಣ್ಣ ಅವರು ಬಲರಾಮಸಿಂಗ್, ಯಂಕುಬಾಯಿ ಹಾಗೂ ಲಲಿತಾಗೆ ವಿವಿಧ ಸೆಕ್ಷನ್‌ ಅಡಿ 6 ತಿಂಗಳು ಜೈಲು ಶಿಕ್ಷೆ ಮತ್ತು ಒಟ್ಟು ₹ 10,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.