
ಯಾದಗಿರಿ ನಗರದ ನೇತಾಜಿ ವೃತ್ತ ಸಮೀಪದಲ್ಲಿ ಮಂಗಳವಾರ ರಸ್ತೆಯಲ್ಲಿ ನಿಂತ ಬಸ್ಗಳು
ಯಾದಗಿರಿ: ನಗರದ ನೇತಾಜಿ ಸುಭಾಷ್ ಬೋಸ್ ವೃತ್ತದ ಸಮೀಪ ನಿಲುಗಡೆಗೆ ಅವಕಾಶ ಇಲ್ಲದೆ ಇದ್ದರೂ ರಸ್ತೆಯಲ್ಲೇ ಬಸ್ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬಸ್ ಚಾಲಕರನ್ನು ಮಂಗಳವಾರ ಕೆಲಹೊತ್ತು ತಡೆದ ನಿಲ್ಲಿಸಿದ ಟ್ರಾಫಿಕ್ ಸಿಬ್ಬಂದಿ, ಚಾಲಕರನ್ನು ತರಾಟೆಗೆ ತೆಗೆದುಕೊಂಡರು.
ವೃತ್ತ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ಶಹಾಪುರ ಮತ್ತು ಕಲಬುರಗಿ ಮಾರ್ಗವಾಗಿ ಬರುವ ಬಸ್ಗಳು ನಿಲುಗಡೆ ಆಗುತ್ತಿವೆ. ಆಟೊಗಳು ಸಹ ಇಲ್ಲಿಯೇ ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಟ್ರಾಫಿಕ್ ಅಧಿಕಾರಿಗಳ ಗಮನಕ್ಕೆ ತಂದರು.
ಬಸ್ ನಿಲುಗಡೆ ಮಾಡದಂತೆ ಟ್ರಾಫಿಕ್ ಅಧಿಕಾರಿಗಳು ಸೂಚಿಸಿದರೂ ಮೂರು ಬಸ್ಗಳನ್ನು ಏಕಕಾಲದಲ್ಲಿ ನಿಲುಗಡೆ ಮಾಡಲಾಗಿತ್ತು. ಇದನ್ನು ಕಂಡು ಕೋಪಿತರಾದ ಟ್ರಾಫಿಕ್ ಅಧಿಕಾರಿ ವೀರೇಶ ಕೆ.ಎಂ. ಅವರು ಬಸ್ಗಳನ್ನು ತಡೆದು ನಿಲ್ಲಿಸಿದರು. ಮೂರು ಬಸ್ಗಳ ಚಾಲಕ ಮತ್ತು ನಿರ್ವಾಹಕರನ್ನು ಕೆಳಗೆ ಇಳಿಸಿ ಅವರನ್ನು ತರಾಟೆಗೆ ತೆಗೆದುಕೊಂಡು ನಿಯಮಗಳ ಪಾಠ ಮಾಡಿದರು.
‘ವೃತ್ತ ಸಮೀಪದ ರಸ್ತೆಯಲ್ಲಿ ಬಸ್ಗಳನ್ನು ನಿಲ್ಲಿಸದಂತೆ ಕೆಕೆಆರ್ಟಿಸಿ ಯಾದಗಿರಿ ವಿಭಾಗದ ಮ್ಯಾನೇಜರ್ಗೆ ಹಲವು ಪತ್ರಗಳನ್ನು ಬರೆದು, ಎಚ್ಚರಿಕೆ ಕೊಟ್ಟಿದ್ದೇವೆ. ಆದರೂ ನಿಲ್ಲಿಸುತ್ತಿದ್ದಿರಾ. ನಿಯಮಗಳ ಅರಿವಿಲ್ಲವೇ? ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗೊತ್ತಾಗುವುದಿಲ್ಲವೇ’ ಎಂದು ಏರು ಧ್ವನಿಯಲ್ಲಿ ದಬಾಯಿಸಿದರು.
ಇನ್ನೂ ಮುಂದೆ ಇಲ್ಲಿ ನಿಲ್ಲಿಸಲ್ಲ, ಈಗ ಬಿಡುವಂತೆ ಚಾಲಕರು ಮನವಿ ಮಾಡಿಕೊಂಡರು. ‘ಮನವಿ ಪತ್ರ, ಬಾಯಿ ಮಾತಿಗೆ ಕೇಳುವವರಲ್ಲ. ಡಿಪೋ ಮ್ಯಾನೇಜರ್ಗೆ ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿ ಇಲ್ಲವೇ ಪೊಲೀಸ್ ಸ್ಟೇಷನ್ಗೆ ನಡೆಯಿರಿ’ ಎಂದರು. ಆತಂಕಕ್ಕೆ ಒಳಗಾದ ಚಾಲಕರು, ‘ಡಿಪೋ ಮ್ಯಾನೇಜರ್ಗೆ ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂದರು.
ಬಸ್ನಲ್ಲಿ ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಹತ್ತಿದ್ದರಿಂದ ಅವರ ಪರಿಸ್ಥಿತಿ ಅರಿತ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಮತ್ತೆ ನಿಲ್ಲಿಸದಂತೆ ತಾಕೀತು ಸಹ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.