
ವಡಗೇರಾ: ‘ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಕರ ವಸೂಲಾತಿ ಅವಶ್ಯಕ, ತಾವೆಲ್ಲರೂ ಕಡ್ಡಾಯವಾಗಿ ಹಿಂದೆ-ಮುಂದೆ ಆಲೋಚಿಸದೆ ತೆರಿಗೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಹೇಳಿದರು.
ತಾಲ್ಲೂಕಿನ ಗುಂಡಗುರ್ತಿ ಕೊಂಕಲ್, ಐಕೂರು, ಟಿ ವಡಗೇರಾ, ತುಮಕೂರು ಹಾಗೂ ಗ್ರಾಪಂ ವ್ಯಾಪ್ತಿಯ ಟೋಕಾಪುರ, ಅನುವಾರ, ತುಮಕೂರು ಗ್ರಾಮಗಳಿಗೆ ಬೇಟಿ ನೀಡಿದ ನಂತರ ಅವರು ಮಾತನಾಡಿದರು
‘ಗ್ರಾಮ ಪಂಚಾಯಿತಿಯ ಸಿಬ್ಬಂದಿ ಕರ ವಸೂಲಾತಿ ಸಂಗ್ರಹದಲ್ಲಿ ಮುಂಚುಣಿಯಲ್ಲಿ ಇರಬೇಕು. ಯಾವುದೇ ಗ್ರಾಮ ಪಂಚಾಯಿತಿಯಿಂದ ಕಡಿಮೆ ಕರ ಸಂಗ್ರಹ ಮಾಡಬಾರದು. ಗ್ರಾಮಸ್ಥರಿಗೆ ಗ್ರಾಮಗಳಲ್ಲಿ ಒದಗಿಸುವ ಮೂಲಕ ಸೌಕರ್ಯಗಳ ಹಾಗೂ ಅಭಿವೃದ್ಧಿ ಬಗ್ಗೆ ತಿಳಿ ಹೇಳಿ, ಕರ ವಸೂಲಾತಿ ಮಾಡಬೇಕು’ ಎಂದು ತಿಳಿಸಿದರು.
‘ಬೆಳಿಗ್ಗೆ 6 ಗಂಟೆಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ತಂಡಗಳನ್ನು ಮಾಡಿಕೊಂಡು, ಗ್ರಾಮಗಳ ಮನೆ ಮನೆಗೆ ತೆರಳಿ, ಆನ್ಲೈನ್ನಲ್ಲಿ ನೊಂದಣಿಯಾದ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ನೀಡಿ ರಸೀದಿ ನೀಡಿ ತೆರಿಗೆ ಸಂಗ್ರಹ ಮಾಡಬೇಕು. ಜಿಲ್ಲೆಯಾದ್ಯಂತ ಜ. 19 ರಂದು ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದ್ದು, ಅದರಲ್ಲಿ ಪ್ರತಿ ತಾಲ್ಲೂಕು, ಗ್ರಾಪಂ ಗಳಿಗೆ ನಿಗದಿತ ಗುರಿಯನ್ನು ನೀಡಲಾಗಿದೆ’ ಎಂದರು.
ಸಿಇಒ ತಾವೇ ಖುದ್ದಾಗಿ ಹಲವು ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ, ಮನೆಯ ಮಾಲೀಕರಿಗೆ ತಿಳಿಹೇಳಿ ತೆರಿಗೆ ಕಟ್ಟಲು ಪ್ರೋತ್ಸಾಹಿಸಿದರು. ಗ್ರಾಪಂ ಸಿಬ್ಬಂದಿ ಯಾವುದೇ ನಿರ್ಲಕ್ಷ ತೋರದೆ ದಿನವಿಡಿ ಕರ ವಸೂಲಿ ಮಾಡಬೇಕು. ಈ ವಿಶೇಷ ತೆರಿಗೆ ಅಭಿಯಾನದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ ಮಾಡಬೇಕು ಎಂದು ಸೂಚಿಸಿದರು
ಇದೇ ವೇಳೆ ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಸಂಗ್ವಾರ ಅವರು ಸಹ ತಾಲ್ಲೂಕಿನ ಗುಲಸರಂ, ನಾಯ್ಕಲ್, ವಡಗೇರಾ (ಹೆಚ್), ಹೈಯಾಳ(ಬಿ) ತುಮಕೂರು ಸೇರಿದಂತೆ ವಿವಿಧೆಡೆ ತೆರಳಿ ತೆರಿಗೆ ಸಂಗ್ರಹ ವ್ಯವಸ್ಥೆ ಪರಿಶೀಲಿಸಿ, ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿ ತೆರಿಗೆ ಕಟ್ಟಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಡಿಒ ಶರಣುಗೌಡ ಬಿ ಉಳ್ಳೆಸೂಗುರು, ಸಿದ್ಧವೀರಪ್ಪ, ಶರಣಬಸವ, ಕಿರಣಬಾಬು , ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೆಶ, ಗ್ರಾಪಂ ಸಿಬ್ಬಂದಿ, ಗ್ರಾಪಂ ಒಕ್ಕೂಟದ ಸದಸ್ಯರು ಕರವಸೂಲಾತಿ ಅಭಿಯಾನದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.