
ಯಾದಗಿರಿ: ‘ಅನುಗ್ರಹ ಕ್ಷೇತ್ರ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಫೆಬ್ರುವರಿ 11ರಿಂದ ಆರಂಭವಾಗಿದ್ದು, ಫೆ.22ರ ಸಂಜೆ 6.15ಕ್ಕೆ ವಿಶ್ವಾರಾಧ್ಯರ ರಥೋತ್ಸವ ಸಂಭ್ರಮದಿಂದ ಜರುಗಲಿದೆ’ ಎಂದು ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ತಿಳಿಸಿದರು.
ಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿ-ಮತಗಳನ್ನು ಮೀರಿನಿಂತ ಮಹಾಂತರ ಜಾತ್ರೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿವೆ. ಫೆ.22ರ ಬೆಳಿಗ್ಗೆ 10ಕ್ಕೆ ರಥೋತ್ಸವ ಮಹಾಪೂಜೆ, ರಥಾಂಗ ಹೋಮ ಜರುಗಲಿದೆ’ ಎಂದರು.
‘ರಥೋತ್ಸವದ ಬಳಿಕ ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ನಡೆಯಲಿದ್ದು, ಕೊಪ್ಪಳ ಗವಿ ಸಿದ್ದೇಶ್ವರ ಮಠದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಮಹಾಂತಲಿಂಗ ಶಿವಾಚಾರ್ಯರು, ಮಠಾಧೀಶರ ಒಕ್ಕೂಟದ ಅಧ್ಯಕ್ಷ ಶಿವಮೂರ್ತಿ ಶಿವಾಚಾರ್ಯರು, ಸೊನ್ನ ಮಠದ ಶಿವಾನಂದ ಸ್ವಾಮೀಜಿ, ಶಹಾಪುರದ ಸೂಗೂರೇಶ್ವರ ಶಿವಾಚಾರ್ಯರು, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಕುಕನೂರಿನ ಚನ್ನಮಲ್ಲ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರ ಸಾನ್ನಿಧ್ಯ ಇರಲಿದೆ’ ಎಂದು ಹೇಳಿದರು.
‘ಸಚಿವರಾದ ಎಚ್.ಕೆ. ಪಾಟೀಲ ಮತ್ತು ರಾಮಲಿಂಗಾರೆಡ್ಡಿ ಅವರು ಸಮಾವೇಶದ ಜ್ಯೋತಿ ಬೆಳೆಗಿಸುವರು. ಸಚಿವರಾದ ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ ಹಾಗೂ ಎನ್.ಎಸ್. ಭೋಸರಾಜು ಗ್ರಂಥ ಬಿಡುಗಡೆ ಮಾಡುವರು’ ಎಂದರು.
‘ಮುಖ್ಯ ಅತಿಥಿಗಳಾಗಿ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ಸಿಂಗ್, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ಬಿ.ಜಿ. ಪಾಟೀಲ, ಶಶೀಲ್ ಜಿ.ನಮೋಶಿ, ಮಹಾರಾಷ್ಟ್ರದ ಮಾಜಿ ಸಚಿವರಾದ ಸಿದ್ದರಾಮ ಮೇತ್ರೆ, ರಾಜೂಗೌಡ, ಮಾಜಿ ಶಾಸಕರಾದ ಸೌಮ್ಯರೆಡ್ಡಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ಹಣಮೇಗೌಡ ಬೀರನಕಲ್ ಸೇರಿದಂತೆ ಹಲವರು ಪಾಲ್ಗೊಳ್ಳುವರು. ರಸಮಂಜರಿ, ಸೇವಾರ್ಥಿಗಳಿಗೆ ಪುರಸ್ಕಾರವೂ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
‘ಫೆ.23ರ ಸಂಜೆ 7ಕ್ಕೆ ನಡೆಯುವ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ‘ಶೆಟ್ಟಿಯ ಹಾರಾಟ ಸಂಗವ್ವನ ಚೆಲ್ಲಾಟ’ ನಾಟಕಕ್ಕೆ ಎಡಿಸಿ ರಮೇಶ ಕೋಲಾರ ಅವರು ಚಾಲನೆ ನೀಡುವರು. ಫೆ.24ರ ಬೆಳಿಗ್ಗೆ 10ಕ್ಕೆ ನಡೆಯುವ ಶರಣ ಸಂಸ್ಕೃತಿ ಶಿಬಿರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಉದ್ಘಾಟಿಸುವರು. ಸಂಜೆ 7ಕ್ಕೆ ‘ಅಪ್ಪ ನೀಚ ಮಗ ಅರೆಹುಚ್ಚ’ ನಾಟಕವನ್ನು ಡಿವೈಎಸ್ಪಿ ಸುರೇಶ ಎಂ. ಅವರು ಉದ್ಘಾಟಿಸುವರು’ ಎಂದು ಮಾಹಿತಿ ನೀಡಿದರು.
‘ಫೆ.25ರ ಸಂಜೆ 7ಕ್ಕೆ ‘ಭೂಮಿ ತೂಕದ ಹೆಣ್ಣು’ ನಾಟಕವನ್ನು ಡಿಎಚ್ಒ ಡಾ.ಮಹೇಶ ಬಿರಾದಾರ ಉದ್ಘಾಟನೆ ಮಾಡುವರು. ಫೆ.26ರ ಸಂಜೆ ಕಳಸ ಅವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಪ್ರಮುಖರಾದ ವಿಶ್ವನಾಥರೆಡ್ಡಿ ಮಾಲಿ ಪಾಟೀಲ, ಮಠದ ವಕ್ತಾರ ಸುಭಾಶ್ಚಂದ್ರ ಕೌಲಗಿ, ನರಸಣ್ಣ ಗೌಡ ರಾಯಚೂರು ಉಪಸ್ಥಿತರಿದ್ದರು.
ಭಕ್ತರ ದಂಡು; ಸಿದ್ಧತೆ ಜೋರು
ಕ್ಷೇತ್ರದಲ್ಲಿ ಜಾತ್ರೆ ಹಾಗೂ ರಥೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ರಥವನ್ನು ತೊಳೆದು ಅಣಿಗೊಳಿಸಲಾಗುತ್ತಿದೆ. ಗ್ರಾಮದಲ್ಲಿ ಮಿಠಾಯಿ ಹೋಟೆಲ್ ಆಟಿಕೆ ಸಾಮಗ್ರಿ ಮಳಿಗೆಗಳನ್ನು ಹಾಕುವಲ್ಲಿ ವರ್ತಕರು ನಿರತವಾಗಿದ್ದಾರೆ. ಮಾಘ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಭಕ್ತರು ಕುಟುಂಬ ಸಮೇತರಾಗಿ ಬಂದು ವಿಶ್ವಾರಾಧ್ಯ ಭಗಳಾಂಭದೇವಿ ದರ್ಶನ ಮಾಡಿ ಗಂಗಾಧರ ಶಿವಾಚಾರ್ಯರ ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.