ಯಾದಗಿರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜಿಲ್ಲೆಯ ಮಳೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಹುತೇಕ ರೈತರು, ‘ಹಸಿ ಬರಗಾಲ ಪ್ರದೇಶವೆಂದು ಘೋಷಿಸಿ, ಹೆಚ್ಚಿನ ಪರಿಹಾರ ಕಲ್ಪಿಸಬೇಕು’ ಎಂದು ಪ್ರಸ್ತಾಪ ಮಾಡಿದರು.
ಕಲಬುರಗಿಯಿಂದ ಬರುತ್ತಿದ್ದಂತೆ ಶಹಾಪುರ ತಾಲ್ಲೂಕಿನ ಸಾದ್ಯಾಪುರ ಗ್ರಾಮದ ಯೋಗೇಶ ಮಲ್ಲಿಕಾರ್ಜುನ ಅವರ ಜಮೀನಿಗೆ ಭೇಟಿ ಕೊಟ್ಟರು.
ಬಿಜೆಪಿ ತಂಡ ಜಮೀನಿಗೆ ಕಾಲುಡುತ್ತಿದ್ದಂತೆ ಯೋಗೇಶ ಅವರು, ‘ಮೂರು ತಿಂಗಳ ಬೆಳೆ, ಇನ್ನಷ್ಟು ವಾರಗಳು ಕಳೆದರೆ ಲಕ್ಷಾಂತರ ರೂಪಾಯಿ ಕೈಸೇರಿತ್ತಿತ್ತು. ಆದರೆ ಮಳೆ ಎಲ್ಲವನ್ನು ಕಸಿದುಕೊಂಡಿದೆ. ಒಬ್ಬ ಅಧಿಕಾರಿಯೂ ಭೇಟಿ ಕೊಟ್ಟಿಲ್ಲ, ನಮ್ಮ ಗೋಳು ಕೇಳಿಲ್ಲ. ಈಗಿರುವ ಬೆಳೆ ತೆಗೆದು ಮತ್ತೆ ಬಿತ್ತನೆ ಮಾಡುವಷ್ಟು ಹಣವಿಲ್ಲ, ಬಿತ್ತಿದ ಬೆಳೆ ಬರುವ ನಿರೀಕ್ಷೆಯೂ ಇಲ್ಲ. ನಮ್ಮಲ್ಲಿ ಹಸಿ ಬರಗಾಲ ಬದ್ದಿದೆ’ ಎಂದರು.
ಆ ಬಳಿಕ ಪ್ರವಾಹ ಪೀಡಿತ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮಕ್ಕೆ ತೆರಳಿದರು. ನೀರಿನಿಂದ ಆವೃತ್ತವಾಗಿದ್ದ ಮನೆಗಳಿಗೆ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸಿದರು. ಶಹಾಪುರ ರಸ್ತೆ ಬದಿಯ ಭತ್ತದ ಗದ್ದೆಗೂ ಭೇಟಿ ಕೊಟ್ಟರು. ಈ ವೇಳೆ ಕಾದು ನಿಂತಿದ್ದ ರೈತರು, ‘ಹಸಿ ಬರಗಾಲ ಘೋಷಣೆ ಮಾಡಿಸಿ, ಹೆಚ್ಚಿನ ಪರಿಹಾರ ಕೊಡಿಸಬೇಕು’ ಎಂದು ಮನವಿ ಮಾಡಿದರು.
ಅಲ್ಲಿಂದ ಬೆಂಡೆಗುಂಬಳ್ಳಿಗೆ ತೆರಳಿದ ತಂಡ, ಭೀಮಾ ನದಿ ಪ್ರವಾಹದಿಂದ ಹಾಳಾದ ಬೆಳೆ, ಮನೆಗಳನ್ನು ವಿಕ್ಷೀಸಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಶಿವಪುರದ ಗ್ರಾಮಸ್ಥರನ್ನು ಭೇಟಿ ಮಾಡಿದರು. ಅಲ್ಲಿನ ಜನರು ಶಿವಪುರ ಗ್ರಾಮ ಸ್ಥಳಾಂತರ ಮಾಡುವ ಕುರಿತು ಮನವಿ ಮಾಡಿದ್ದರು.
ಈ ವೇಳೆ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯ ಕಾರ್ಯದರ್ಶಿಯೂ ಆಗಿರುವ ನಗರಸಭೆ ಅಧ್ಯಕ್ಷೆ ಕಲಲಿತಾ ಅನಪುರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮುಖಂಡರಾದ ಅಮರನಾಥ ಪಾಟೀಲ, ಅಮೀನರೆಡ್ಡಿ ಯಾಳಗಿ, ಶರಣಭೂಪಾಲರೆಡ್ಡಿ, ರಾಚಣ್ಣಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಚಂದ್ರಶೇಖರಗೌಡ ಮಾಗನೂರ, ದೇವಿಂದ್ರನಾಥ ನಾದ, ದೇವರಾಜ ನಾಯಕ ಉಳ್ಳೆಸೂಗುರ, ಗುರು ಕಾಮ, ಪರುಶುರಾಮ ಕುರಕುಂದಿ, ಮೆಲಪ್ಪ ಗುಳಗಿ, ಹಣಮಂತ ಇಟಗಿ, ಸಿದ್ದಣ್ಣಗೌಡ ಕಾಡಂನೋರ, ಬಸವರಾಜ ಸೊನ್ನದ, ಶ್ರೀಧರ ಆರ್ ಸಾಹುಕಾರ, ರಾಜುಗೌಡ ಉಕ್ಕನಾಳ, ವೆಂಕಟರೆಡ್ಡಿ ಅಬ್ಬೆತೂಮಕುರ, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿ ಹಲವರು ಉಪಸ್ಥಿತರಿದ್ದರು.
‘ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಬೆಳೆಗಳ ಪ್ರತಿ ಎಕರೆಗೆ ₹25 ಸಾವಿರದಿಂದ ₹30 ಸಾವಿರ ಪರಿಹಾರವನ್ನು ಕೂಡಲೇ ನೀಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. ಶಹಾಪುರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಶೇ70ರಷ್ಟು ಬೆಳೆಗಳು ಹಾಳಾಗಿವೆ. ರಾಜ್ಯ ಸರ್ಕಾರ ಪರಿಹಾರದತ್ತ ಗಮನ ಹರಿಸದೆ ಸಭೆ ವೈಮಾನಿಕ ಸಮೀಕ್ಷೆ ನೆಪದಲ್ಲಿ ಕಾಲಹರಣ ಮಾಡುತ್ತಿದೆ’ ಎಂದರು. ‘ಕಲ್ಯಾಣ ಕರ್ನಾಟಕದಲ್ಲಿ ಆಗಿರುವ ಬೆಳೆ ಹಾನಿಯ ಪರಿಹಾರಕ್ಕೆ ರಾಜ್ಯ ಸರ್ಕಾರ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರದ ಮಟ್ಟದಲ್ಲಿ ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಾ ಖಾತೆಗಳ ಸಚಿವರಂತೆ ವರ್ತಿಸುತ್ತಿದ್ದಾರೆ. ಚಿತ್ತಾಪುರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಮೊದಲು ಹಾಳಾದ ಅಲ್ಲಿನ ಬೆಳೆಗಳನ್ನು ವೀಕ್ಷಿಸಿ ರೈತರಿಗೆ ಪರಿಹಾರ ಕೊಡಲಿ. ಆ ನಂತದ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಬಗ್ಗೆ ಮಾತಾಡಲಿ’ ಎಂದರು.
‘ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಯಡಿಯೂರಪ್ಪ ಅವರು ನೆರೆ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿದ್ದನ್ನು ಸಾಬೀತು ಮಾಡಿದರೆ ಪ್ರಿಯಾಂಕ್ ಅವರು ರಾಜೀನಾಮೆ ಕೊಡುತ್ತಾರಾ’ ಎಂದು ಮಾಜಿ ಸಚಿವ ರಾಜುಗೌಡ ಅವರು ಸವಾಲು ಹಾಕಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಈ ಹಿಂದೆ ನೆರೆ ಬಂದಾಗ ಯಡಿಯೂರಪ್ಪ ಸುರಪುರಕ್ಕೆ ಬಂದಿದ್ದರು. ವಿನಾಕಾರಣ ಮೋದಿ ಅವರನ್ನು ಬೈಯುವುದು ಬಿಟ್ಟು ಕೆಲಸ ಮಾಡಿ ತೋರಿಸಲಿ. ನಮ್ಮಲ್ಲಿ ಕೆಲವರು ದೊಡ್ಡವರು ಹೊಂದಾಣಿಕೆ ಮಾಡಿದ್ದರಿಂದ ಕಾರ್ಯಕರ್ತರು ಸಾಯುವಂತೆ ಆಗಿದೆ. ಸಿಕ್ಕಿರುವ ಅಧಿಕಾರವನ್ನು ರೈತರು ಹಾಗೂ ನಮ್ಮ ಭಾಗಕ್ಕೆ ಶಕ್ತಿ ತುಂಬಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.