ADVERTISEMENT

'ಯುವರಾಜ' ಅಮೇಠಿ ತೊರೆದಂತೆ ವಯನಾಡ್‌ ಕ್ಷೇತ್ರದಿಂದಲೂ ಹೊರನಡೆಯುತ್ತಾರೆ: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2024, 10:12 IST
Last Updated 20 ಏಪ್ರಿಲ್ 2024, 10:12 IST
<div class="paragraphs"><p>ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ&nbsp;ಪ್ರಧಾನಿ ನರೇಂದ್ರ ಮೋದಿ</p></div>

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರಗಳು

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭೆ ಕ್ಷೇತ್ರದಿಂದ ತೆರಳಿದಂತೆ ವಯನಾಡ್‌ನಿಂದಲೂ ಹೊರನಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ನಾಂದೇಡ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, 'ಕಾಂಗ್ರೆಸ್‌ ಯುವರಾಜ ಬೇರೆ ದಾರಿಯಿಲ್ಲದೆ ವಯನಾಡ್‌ನಿಂದ ಕಣಕ್ಕಿಳಿದಿದ್ದಾರೆ. ಆದರೆ, ಅವರು ಅಮೇಠಿಯಿಂದ ಹೊರನಡೆದಂತೆ ವಯನಾಡ್‌ನಿಂದಲೂ ತೆರಳಲಿದ್ದಾರೆ' ಎಂದು ಕಿಚಾಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ 'ಐಎನ್‌ಡಿಐಎ–ಇಂಡಿಯಾ' ವಿರುದ್ಧವೂ ಗುಡುಗಿದ್ದಾರೆ. ಲೋಕಸಭೆಗೆ ಮೊದಲ ಹಂತದಲ್ಲಿ ಶುಕ್ರವಾರ ನಡೆದ ಮತದಾನದ ವೇಳೆ, ಜನರು ಕಾಂಗ್ರೆಸ್‌ ಹಾಗೂ 'ಐಎನ್‌ಡಿಐಎ–ಇಂಡಿಯಾ' ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ. 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನು ಬೆಂಬಲಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

'ದಲಿತರು, ಬಡವರು ಹಾಗೂ ನಿರ್ಗತಿಕರ ಏಳಿಗೆಗೆ ಕಾಂಗ್ರೆಸ್‌ ತಡೆಗೋಡೆಯಾಗಿದೆ' ಎಂದು ಆರೋಪಿಸಿರುವ ಪ್ರಧಾನಿ, 'ಐಎನ್‌ಡಿಐಎ ಒಕ್ಕೂಟ ಮತ ಬ್ಯಾಂಕ್‌ ರಾಜಕೀಯವನ್ನಷ್ಟೇ ನಂಬಿದೆ' ಎಂದಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ಈಗಲೂ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುತ್ತಿದೆ ಎಂದು ದೂರಿದ್ದಾರೆ.

'ಕಾಂಗ್ರೆಸ್‌ನವರು ಯಾವುದೇ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತಾರೆ ಎಂದು ಯಾರೊಬ್ಬರೂ ನಂಬುವುದಿಲ್ಲ. ಜನರು ಅವರಿಂದ ಅಭಿವೃದ್ಧಿಯ ದೃಢ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಮರಾಠವಾಡ ಹಾಗೂ ವಿದರ್ಭ ಪ್ರದೇಶಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, 'ಕಾಂಗ್ರೆಸ್‌ ಪಕ್ಷವು ಬೇಕಂತಲೇ ಈ ಪ್ರದೇಶಗಳ ಅಭಿವೃದ್ಧಿಯನ್ನು ದಶಕಗಳಿಂದ ಕಡೆಗಣಿಸಿದೆ. ಮರಾಠವಾಡ ಹಾಗೂ ವಿದರ್ಭದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದಕ್ಕೆ, ಇಲ್ಲಿನ ರೈತರು ಬಡವರಾಗಿಯೇ ಉಳಿದಿರುವುದಕ್ಕೆ ಕಾಂಗ್ರೆಸ್‌ ಯೋಜನೆಗಳೇ ಕಾರಣ. ಕೈಗಾರಿಕಾ ಅಭಿವೃದ್ಧಿಯನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಇಲ್ಲ' ಎಂದು ಗುಡುಗಿದ್ದಾರೆ.

ಇದೇ ವೇಳೆ ಅವರು, ತಮ್ಮ ಸರ್ಕಾರ ನಾಂದೇಡ್‌ನ ಶೇ 80ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ ಎಂದು ಹೇಳಿಕೊಂಡಿದ್ದಾರೆ.

ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ರಾಹುಲ್
ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಸತತ ಮೂರು ಬಾರಿ (2004, 2009, 2014ರಲ್ಲಿ) ಜಯ ಗಳಿಸಿ 'ಹ್ಯಾಟ್ರಿಕ್‌' ಸಾಧನೆ ಮಾಡಿದ್ದ ರಾಹುಲ್‌ ಗಾಂಧಿ, 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ 55 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮಣಿದಿದ್ದರು.‌ ಆದರೆ, 2019ರಲ್ಲಿ ಅಮೇಠಿ ಜೊತೆಗೆ ವಯನಾಡ್‌ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದ ರಾಹುಲ್‌, ಸಿಪಿಐ ಅಭ್ಯರ್ಥಿ ಪಿ.ಪಿ. ಸುನೀರ್‌ ವಿರುದ್ಧ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.

ಈ ಬಾರಿ ವಯನಾಡ್‌ನಿಂದಷ್ಟೇ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಅಮೇಠಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ಚುನಾವಣಾ ಆಯೋಗವು ಮಾರ್ಚ್‌ 16ರಂದು ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ಒಟ್ಟು 102 ಕ್ಷೇತ್ರಗಳಿಗೆ ನಿನ್ನೆ (ಶುಕ್ರವಾರ, ಏಪ್ರಿಲ್‌ 19 ರಂದು) ಮತದಾನವಾಗಿದೆ.

ಉಳಿದ ಹಂತಗಳಲ್ಲಿ ಕ್ರಮವಾಗಿ ಏಪ್ರಿಲ್‌ 26, ಮೇ 7, ಮೇ 13, ಮೇ 20, ಮೇ 25 ಹಾಗೂ ಜೂನ್‌ 1ರಂದು ಮತದಾನ ನಡೆಯಲಿದೆ. ಅಮೇಠಿ ಸೇರಿದಂತೆ ಉತ್ತರ ಪ್ರದೇಶದ ಒಟ್ಟು 14 ಕ್ಷೇತ್ರಗಳಲ್ಲಿ 5ನೇ ಹಂತದಲ್ಲಿ ಮತದಾನವಾಗಲಿದೆ.

ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಏಳೂ ಹಂತಗಳಲ್ಲಿ ಮತದಾನಕ್ಕೆ ಸಾಕ್ಷಿಯಾಗಲಿವೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.