ADVERTISEMENT

ಪ್ರವರ್ಗ ‘2ಎ’ನಿಂದ ಬಲಿಜಿಗರ ತೆಗೆದ ಆರೋಪದಿಂದ ಮುಕ್ತರಾಗಲು ವೀರಪ್ಪ ಮೊಯಿಲಿ ಯತ್ನ?

ಪ್ರವರ್ಗ ‘2ಎ’ನಿಂದ ಬಲಿಜಿಗರ ತೆಗೆದ ಆರೋಪದಿಂದ ಮುಕ್ತರಾಗಲು ವೀರಪ್ಪ ಮೊಯಿಲಿ ಯತ್ನ?

ಡಿ.ಎಂ.ಕುರ್ಕೆ ಪ್ರಶಾಂತ
Published 8 ಏಪ್ರಿಲ್ 2023, 5:39 IST
Last Updated 8 ಏಪ್ರಿಲ್ 2023, 5:39 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: 1992ರವರೆಗೂ ನಾವು ‘2ಎ’ ಮೀಸಲಾತಿ ಪಟ್ಟಿಯಲ್ಲಿ ಇದ್ದೆವು. ಆದರೆ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಏಕಾಏಕಿ ನಮ್ಮನ್ನು ‘2ಎ’ ಮೀಸಲಾತಿಯಿಂದ ತೆಗೆದರು. ತಾತ್ಕಾಲಿಕವಾಗಿ ತೆಗೆಯುತ್ತೇವೆ ಎಂದು ಶಾಶ್ವತವಾಗಿ ತೆಗೆದರು. ಅಂದು ಯಾವುದೇ ಕಾಂಗ್ರೆಸ್ ನಾಯಕರು ಈ ಬಗ್ಗೆ ಧ್ವನಿ ಎತ್ತಲಿಲ್ಲ– ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರದ ಬಲಿಜ ಸಮುದಾಯದ ಮುಖಂಡರ ಮಾತುಗಳಿವು.

ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿ ಕಲ್ಪಿಸಬೇಕು ಎನ್ನುವ ಆಗ್ರಹ ಮತ್ತು ಹೋರಾಟಗಳು ಎದುರಾದಾಗ ಬಿಜೆಪಿ ಮುಖಂಡರು ವೀರಪ್ಪ ಮೊಯಿಲಿ ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುವರು. ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ಈ ಮಾತುಗಳು ಸದ್ದು ಮಾಡಿದ ಪರಿಣಾಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಸೋಲಬೇಕಾಯಿತು. ಈ ಬಗ್ಗೆ ಕಾಂಗ್ರೆಸ್‌ನಲ್ಲಿರುವ ಬಲಿಜ ಸಮುದಾಯದ ಮುಖಂಡರನ್ನು ಕೇಳಿದರೆ ಮೌನಕ್ಕೆ ಶರಣಾಗುವರು.

ತಮ್ಮ ಮೇಲಿನ ಈ ಆರೋಪದಿಂದ ಮುಕ್ತರಾಗಲು ಮತ್ತು ಜಿಲ್ಲೆಯಲ್ಲಿರುವ ಬಲಿಜ ಸಮುದಾಯದ ವಿಶ್ವಾಸಗಳಿಸಲು ವೀರಪ್ಪ ಮೊಯಿಲಿ ಈ ಬಾರಿ ಬಲಿಜ ಸಮುದಾಯಕ್ಕೆ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಇದಕ್ಕೆ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಹಾಗೂ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಾಥ್ ನೀಡಿದ್ದಾರೆ. ಈ ಮೂಲಕ ಸಮುದಾಯದ ವಿಶ್ವಾಸ ಗಳಿಸಬೇಕು ಎನ್ನುವ ವಿಚಾರವೂ ಅವರಿಗೆ ಇದ್ದಂತಿದೆ. ಈ ಜಾತಿ ರಾಜಕಾರಣದ ಲೆಕ್ಕಾಚಾರಗಳಿಂದಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ವಿಚಾರ ವರಿಷ್ಠರಿಗೆ ಕಗ್ಗಂಟಾಗಿದೆ. ಮೂರನೇ ಪಟ್ಟಿಯಲ್ಲಿ ಅಂತಿಗೊಳ್ಳುವ ಸಾಧ್ಯತೆ ಇದೆ.

ADVERTISEMENT

ಬೆಂಗಳೂರಿನ ವೀರಪ್ಪ ಮೊಯಿಲಿ ಅವರ ಮನೆಯಲ್ಲಿ ಟಿಕೆಟ್ ವಿಚಾರವಾಗಿ ಸಭೆಗಳು ಸಹ ನಡೆದಿವೆ. ಆ ಸಭೆಯಲ್ಲಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿ ವಿನಯ್ ಶ್ಯಾಮ್ ಗೈರಾಗಿದ್ದರು. ಪ್ರದೀಪ್ ಈಶ್ವರ್ ಹಾಜರಿದ್ದರು. ಜಾತಿ ಲೆಕ್ಕಾಚಾರಗಳೇ ಪ್ರದೀಪ್ ಈಶ್ವರ್ ಹೆಸರು ಚರ್ಚೆಗೆ ಬರಲು ಸಹ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಕ್ಕಲಿಗ, ರೆಡ್ಡಿ ಸಮುದಾಯಕ್ಕೆ ಟಿಕೆಟ್ ನೀಡಲಿದೆ. ಅಹಿಂದ ವರ್ಗಕ್ಕೆ ಟಿಕೆಟ್ ನೀಡಲು ಅವಕಾಶವಿರುವುದು ಚಿಕ್ಕಬಳ್ಳಾಪುರದಲ್ಲಿ ಮಾತ್ರ.

ಸಾಮಾಜಿಕ ನ್ಯಾಯ ತತ್ವದ ಅಡಿಯಲ್ಲಿ ವಿನಯ್ ಅವರಿಗೆ ಟಿಕೆಟ್ ನೀಡಬೇಕು. ಈ ಹಿಂದೆ ಅವರ ತಂದೆಯೂ ಪಕ್ಷಕ್ಕೆ ಕೆಲಸ ಮಾಡಿದ್ದು ಅವರಿಗೂ ಟಿಕೆಟ್ ನೀಡಲಿಲ್ಲ ಎಂದರು.

‘ಒಂದು ವೇಳೆ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಿದರೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನಿಂದ ಹಲವು ದಶಕಗಳ ನಂತರ ಬಲಿಜ ಸಮುದಾಯಕ್ಕೆ ಟಿಕೆಟ್ ದೊರೆತಂತೆ ಆಗುತ್ತದೆ. ಸಮುದಾಯದ ಬಹಳಷ್ಟು ಮುಖಂಡರು ಬಿಜೆಪಿಯಲ್ಲಿ ಗುರುತಿಸಿಕೊಂಡಿರಬಹುದು. ಆದರೆ ಸಮುದಾಯದ ಸಾಮಾನ್ಯ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ. ನಮ್ಮ ಸಮುದಾಯದ ಅಭ್ಯರ್ಥಿಯೊಬ್ಬ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸದಿರಲು ಸಾಧ್ಯವೇ’ ಎಂದು ಬಲಿಜ ಸಮುದಾಯದ ಮುಖಂಡರೊಬ್ಬರು ತಿಳಿಸುವರು.

ಅಹಿಂದ ವಸರ್ಸ್‌ ಎದುರಾಳಿ: ‘ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಅಹಿಂದ ಮತ್ತು ಎದುರಾಳಿಗಳು ಎನ್ನುವ ರೀತಿ ಚುನಾವಣೆ ನಡೆಯಲಿದೆ. ಜೆಡಿಎಸ್ ನಮ್ಮ ಪಕ್ಷದ ಮತಗಳ ಬುಟ್ಟಿಗೆ ಕೈ ಹಾಕುವುದಿಲ್ಲ. ಜೆಡಿಎಸ್, ಬಿಜೆಪಿಯ ಮತಗಳಿಗೆ ಕೈ ಹಾಕಲಿದೆ. ಪ್ರದೀಪ್ ಈಶ್ವರ್ ಪಕ್ಷದ ಸದಸ್ಯರಲ್ಲ. ಅವರ ಕೊಡುಗೆ ಪಕ್ಷಕ್ಕೆ ಇಲ್ಲ. ಸಚಿವರ ಪರವಾಗಿ ಅವರು ಇದ್ದಾರೆ. ಕೇವಲ ಸಮುದಾಯವನ್ನು ನೋಡಿ ಪಕ್ಷ ಟಿಕೆಟ್ ನೀಡಿದರೆ ಹೇಗೆ? ವಿನಯ್ ಎನ್.ಶ್ಯಾಮ್ ಕುಟುಂಬದವರು ಕಾಂಗ್ರೆಸ್‌ಗಾಗಿ ಸುದೀರ್ಘವಾಗಿ ಕೆಲಸ ಮಾಡಿದ್ದಾರೆ. ವಿನಯ್ ಅವರಿಗೆ ಟಿಕೆಟ್ ನೀಡಬೇಕು’ ಎನ್ನುತ್ತಾರೆ ವಿನಯ್ ಶ್ಯಾಮ್ ಬೆಂಬಲಿಗರಾದ ಕಾಂಗ್ರೆಸ್ ಮುಖಂಡ ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.