ಪ್ರಕಾಶ್ ರಾಜ್
ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೊಟೋ ಹರಿಬಿಡುತ್ತಿರುವುದರ ವಿರುದ್ಧ ನಟ ಪ್ರಕಾಶ್ ರಾಜ್ ಅವರು ಪ್ರಶಾಂತ್ ಸಂಬರಗಿ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ಶನಿವಾರ ಬೆಳಿಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
'ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್ಬುಕ್ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ಪ್ರಶಾಂತ್ ಸಂಬರಗಿ ಅವರಿಗೆ ಇ ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರೆದಿದೆ' ಎಂದು ಪೊಲೀಸರು ತಿಳಿಸಿದರು.
ಸಂಬರಗಿಗೆ ಪಾಠ ಕಲಿಸಲು ದೂರು: ಪ್ರಕಾಶ್ ರಾಜ್
'ಪ್ರಶಾಂತ್ ಸಂಬರಗಿ ನಟಿಯರೂ ಸೇರಿದಂತೆ ಅನೇಕರಿಗೆ ಈ ರೀತಿ ತೊಂದರೆ ನೀಡಿದ್ದು, ಆತನಿಗೆ ಪಾಠ ಕಲಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗವೇಕು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ' ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಇಲ್ಲಿನ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, 'ತಪ್ಪು ಪ್ರಚಾರ ಮಾಡುವುದು, ಅನುಮತಿ ಇಲ್ಲದೆ ಯಾರದೋ ಫೋಟೊಗಳನ್ನು ಬಳಸುವುದು ಅಕ್ಷಮ್ಯ ಅಪರಾಧ' ಎಂದರು.
ಕುಂಭಮೇಳದಲ್ಲಿನ ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿದಾಗ 'ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆಂದು ಅವರ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು' ಎಂದರು.
ಕುಂಭಮೇಳದ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ, 'ಅವರವರ ಭಾವಕ್ಕೆ ಅವರ ಬಕುತಿಗೆ ಹೇಳುತ್ತಾ ಹೋಗಲಿ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾವ ನಂಬಿಕೆಯ ಬಗ್ಗೆ ಟೀಕೆ ಮಾಡಲ್ಲ' ಎಂದು ತಿಳಿಸಿದರು.
'ನಾನು ಮೂಢನಂಬಿಕೆಯನ್ನಷ್ಟೇ ಪ್ರಶ್ನಿಸುತ್ತೇನೆ. ಈ ಹಿಂದೆ ಕ್ರಿಶ್ಚಿಯನ್ ಗಿಂತ ದೊಡ್ಡ ಮಾಫಿಯಾ ಇನ್ನೊಂದಿಲ್ಲ. ಮುಸ್ಲೀಂರಲ್ಲೂ ದೊಡ್ಡ ಟೆರೆರಿಸ್ಟ್ ಗಳು ಇದ್ದಾರೆ ಎಂದು ಹೇಳಿದ್ದೇನೆ. ಅದು ಹೈಲೈಟ್ ಆಗಿಲ್ಲ. ನಾನು ಯಾವತ್ತೂ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ಅದೇ ಕೆಲಸ ಮಾಡುವವರು ದೂಷಿಸುತ್ತಾರೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.