
45ಸಿನಿಮಾ ಮೊದಲ ಪ್ರದರ್ಶನದ ಬಳಿಕ, ಅರ್ಜುನ್ ಜನ್ಯ, ರಾಜ್ ಬಿ. ಶೆಟ್ಟಿ, ಶಿವರಾಜ್ ಕುಮಾರ್,ಉಪೇಂದ್ರ
ಬೆಂಗಳೂರು: ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಸಿನಿಮಾ ‘45’ ಡಿಸೆಂಬರ್ 25ರಂದು ತೆರೆಮೇಲೆ ಬರಲಿದೆ. ಈ ನಡುವೆ ನಿನ್ನೆ (ಡಿಸೆಂಬರ್ 23ರಂದು) ಮಾಧ್ಯಮದವರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸಿನಿಮಾ ಪ್ರದರ್ಶಗೊಂಡ ಬಳಿಕ ನಟ ಶಿವರಾಜ್ ಕುಮಾರ್ ಹಾಗೂ ರಾಜ್ ಬಿ. ಶೆಟ್ಟಿ ಅವರು ಮಾತನಾಡಿ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಹಾಡಿಹೊಗಳಿದ್ದಾರೆ.
ಸಂಗೀತ ನಿರ್ದೇಶಕರಾಗಿ ನೂರಕ್ಕೂ ಅಧಿಕ ಹಾಡುಗಳನ್ನು ರಚಿಸಿ ಹಾಡಿರುವ ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ‘ಹೊಸ ನಿರ್ದೇಶಕ ಹಲವು ಕನಸುಗಳನ್ನು ಹೊತ್ತು ಬರುತ್ತಾರೆ. ಅರ್ಜುನ್ ಜನ್ಯ ಅವರು ನನ್ನ ಬಳಿ ಬಂದಾಗ 4 ರಿಂದ 5 ನಿಮಿಷದ ಕಥೆ ಹೇಳಿದ್ರು. ಅದು ನನ್ನ ಮನಸ್ಸಿಗೆ ಹಿಡಿಸಿ ನೀವೆ ನಿರ್ದೇಶನ ಮಾಡಿ ಎಂದು ಹೇಳಿದೆ. ಸಿನಿಮಾದಲ್ಲಿ ಭಾಗಿಯಾದ ಬಳಿಕ ನನಗೆ ಅನಿಸಿತು, ಅವರು ಹಾಡುಗಾರ ಮಾತ್ರವಲ್ಲ, ಅತ್ಯುತ್ತಮ ನಿರ್ದೇಶಕರೂ ಹೌದು ಎಂದು’ ಎಂದರು.
ರಾಜ್ ಬಿ. ಶೆಟ್ಟಿ ಅವರು ಮಾತನಾಡಿ, ‘ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರೂ ಇದು ಅವರ ಮೊದಲ ನಿರ್ದೇಶನ ಎಂದು ಅನಿಸುತ್ತಿಲ್ಲ. ಅಷ್ಟು ಚೆನ್ನಾಗಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅವರ ಮೂರು ವರ್ಷದ ಪರಿಶ್ರಮ ಈ ಸಿನಿಮಾದಲ್ಲಿದೆ. ಎಲ್ಲರೂ ಹರಸಿ’ ಎಂದು ಕೋರಿದರು.
ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ‘ನನ್ನನ್ನು ನಿರ್ದೇಶಕರನ್ನಾಗಿ ಮಾಡಿದ್ದು ಶಿವರಾಜ್ ಕುಮಾರ್ ಅಣ್ಣ, ಅವರಿಗೆ ಧನ್ಯವಾದ ತಿಳಿಸುತ್ತೇನೆ. ಉಪೇಂದ್ರ ಸರ್ ಹಾಗೂ ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.