ADVERTISEMENT

Sandalwood: ಚಿತ್ರವಾಗಲಿದೆ ರವಿ ಬೆಳಗೆರೆ ಅವರ ‘ಭೀಮಾತೀರದ ಹಂತಕರು’ ಕಾದಂಬರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 23:30 IST
Last Updated 22 ಫೆಬ್ರುವರಿ 2026, 23:30 IST
   

ಪತ್ರಕರ್ತ ರವಿ ಬೆಳಗೆರೆ ಅವರ ‘ಭೀಮಾ ತೀರದ ಹಂತಕರು’ ಕಾದಂಬರಿ ಚಿತ್ರವಾಗುತ್ತಿದೆ. ‘ಕಬಡ್ಡಿ’ ಖ್ಯಾತಿಯ ನರೇಂದ್ರ ಬಾಬು ನಿರ್ದೇಶನದ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು. 

‘ಕ್ರಿಸ್ತಪೂರ್ವದಿಂದ ಈವರೆಗೂ ಭೀಮಾ ತಟದಲ್ಲಿ ಯುದ್ಧ ನಡೆಯುತ್ತಲೇ ಇದೆ. ಒಂದು ಸಣ್ಣ ಬದುವಿಗೋಸ್ಕರ ಚಂದಪ್ಪ ಹರಿಜನ ಹಾಗೂ ಕೇಶಪ್ಪ ತಾವರಖೇಡ ಕುಟುಂಬಗಳ ನಡುವೆ ಶುರುವಾಗುವ ಗಲಾಟೆ, ದೊಡ್ಡದಾಗಿ ಕೊಲೆಗಳೇ ನಡೆಯುತ್ತವೆ. ರವಿ ಬೆಳಗೆರೆ ಅವರು ಘಟನೆ ನಡೆದ ಸ್ಥಳಕ್ಕೇ ಹೋಗಿ ವಸ್ತುಸ್ಥಿತಿ ಅಧ್ಯಯನ ಮಾಡಿ ಬರೆದ ಕೃತಿಯನ್ನು ಯಥಾವತ್ತಾಗಿ ತೆರೆ ಮೇಲೆ ತರುತ್ತಿದ್ದೇವೆ. ಸಾಕಷ್ಟು ವಿಚಾರಗಳು ಇರುವುದರಿಂದ ಎರಡು ಭಾಗಗಳಲ್ಲಿ ಚಿತ್ರ ಮೂಡಿಬರಲಿದೆ. ಮೊದಲ ಭಾಗದ ಕಥೆ ಸಿದ್ಧವಿದೆ. ಸಿದ್ಧಪ್ಪ ಅವರ ಹತ್ಯೆಯಾಗುವವರೆಗೂ ನಡೆಯುವ ಘಟನೆಗಳನ್ನು ಈ ಭಾಗದಲ್ಲಿ ದಾಖಲಿಸಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಕಲಬುರಗಿಯಲ್ಲಿ ಬಹುತೇಕ ಚಿತ್ರೀಕರಣ ನಡೆಯುತ್ತದೆ. ರವಿ ಬೆಳಗೆರೆ ಪಾತ್ರದಲ್ಲಿ ಅವರ ಮಗಳು ಭಾವನಾ ಬೆಳಗೆರೆ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು ಬಾಬು.

ನರೇಂದ್ರ ಬಾಬು ಈ ಹಿಂದೆ ‘ಸಂತೆಯಲ್ಲಿ ನಿಂತ ಕಬೀರ’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮುಂತಾದ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

ADVERTISEMENT

ಶ್ರೀ ಗವಿ ರಂಗನಾಥಸ್ವಾಮಿ ಪಿಕ್ಚರ್ಸ್ ಹಾಗೂ ಆಂಜನೇಯ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಯುವನಟ ಲಿಖಿತ್ ಚಂದಪ್ಪ ಹರಿಜನ ಪಾತ್ರ ಮಾಡುತ್ತಿದ್ದಾರೆ. ಜಯವರ್ಧನ, ಸಯ್ಯಾಜಿ ಶಿಂಧೆ, ಶರತ್ ಲೋಹಿತಾಶ್ವ, ಸೋನು ಸೂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಲೋಕಿ ತಾವಸ್ಯ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಚಿತ್ರಗ್ರಹಣ, ಹರೀಶ್ ಕೊಮ್ಮೆ ಸಂಕಲನ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.