ಬೆಂಗಳೂರು: ರಾಜ್ಯದಾದ್ಯಂತ ಜನವರಿ 31 ರಿಂದ ರಾತ್ರಿ ಕರ್ಪ್ಯೂ ರದ್ದು ಮಾಡಲು ಸರ್ಕಾರ ನಿರ್ಧರಿಸಿದ್ದು, ಚಲನಚಿತ್ರ ಮಂದಿರಗಳಲ್ಲಿ ಶೇ 50 ರಷ್ಟು ಪ್ರೇಕ್ಷಕರ ಸಿನಿಮಾ ವೀಕ್ಷಣೆಯನ್ನು ಮುಂದುವರೆಸಲಾಗಿದೆ.
ಕೋವಿಡ್-19ರ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿತ್ರಮಂದಿರಗಳಲ್ಲಿ ಶೇಕಡಾ 50ರ ನಿಯಮ ಮುಂದುವರಿಕೆಗೆ ತೀರ್ಮಾನಿಸಲಾಗಿದೆ.
ಈಗಾಗಲೇ ವಾರಾಂತ್ಯ ಕರ್ಪ್ಯೂ ರದ್ದು ಮಾಡಲಾಗಿದೆ. ಸೋಮವಾರದಿಂದ ರಾತ್ರಿ ಕರ್ಪ್ಯೂ ರದ್ದಾಗಲಿದೆ ಆದರೆ, ಚಿತ್ರಮಂದಿರಗಳಲ್ಲಿ ಶೇಕಡಾ 50ರ ನಿಯಮ ಮುಂದುವರೆದಿರುವುದು ಏಕೆ ಎಂದು ಸಿನಿಮಾ ಕ್ಷೇತ್ರದ ಗಣ್ಯರು ಪ್ರಶ್ನೆ ಮಾಡಿದ್ದಾರೆ.
ಚಲನಚಿತ್ರ ಮಂದಿರಗಳಲ್ಲಿ ತಕ್ಷಣಕ್ಕೆ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಸಿನಿಮಾ ಉದ್ಯಮದವರು ಹೇಳುತ್ತಿದ್ದಾರೆ.
ಈಗ ಶೇ 50 ರಷ್ಟು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು. ಶೇ 100 ರಷ್ಟು ಅವಕಾಶ ನೀಡಬೇಕೆಂಬ ಬೇಡಿಕೆಯ ಬಗ್ಗೆ ತಜ್ಞರ ಸಮಿತಿ ನಿರ್ಧರಿಸಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರದ ಈ ತಿರ್ಮಾನದಿಂದ ಸಿನಿಮಾ ರಂಗದ ನೌಕರರು, ತಂತ್ರಜ್ಞರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹಲವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.