
ನಟ ದರ್ಶನ್
ಚಿತ್ರ: Darshan Thoogudeepa Trends
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ರಿಲೀಸ್ ಆಗಿದೆ. ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಿ ಡೆವಿಲ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಇಲ್ಲದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ದರ್ಶನ್ ಇಲ್ಲದೇ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ‘ಸಾರಥಿ’ ಸಿನಿಮಾ ಬಿಡುಗಡೆ ವೇಳೆಯೂ ನಟ ದರ್ಶನ್ ಅವರು ಇರಲಿಲ್ಲ. ಇದೀಗ ಅದೇ ರೀತಿಯ ಘಟನೆ ಮತ್ತೆ ಮರುಕಳಿಸಿದೆ.
2011ರಲ್ಲಿ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಸಾರಥಿ’ ಸಿನಿಮಾ ರಿಲೀಸ್ ವೇಳೆ ದರ್ಶನ್ ಜೈಲಿನಲ್ಲಿದ್ದರು. ಇದಕ್ಕೆ ಕಾರಣ ಅವರ ಪತ್ನಿ ವಿಜಯಲಕ್ಷ್ಮಿ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು. ಆಗ ಖುದ್ದು ವಿಜಯಲಕ್ಷ್ಮಿ ಅವರೇ ದೂರು ದಾಖಲಿಸಿದ್ದರು. ಈ ಸಂಬಂಧ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಆಗ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರು.
ಆಗ ದರ್ಶನ್ ಜೈಲಿನಲ್ಲಿ ಇರುವಾಗಲೇ ‘ಸಾರಥಿ’ ಸಿನಿಮಾ ರಿಲೀಸ್ ಆಗಿತ್ತು. ಆ ಬಳಿಕ ಸಿನಿಮಾ ಯಶಸ್ಸು ಸಾಧಿಸಿತ್ತು. ಮಾತ್ರವಲ್ಲ, 2011ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿತು. ಈಗ ಡೆವಿಲ್ ಸಿನಿಮಾ ಬಿಡುಗಡೆ ವೇಳೆಯೂ ದರ್ಶನ್ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಮೊದಲು ಜಾಮೀನು ಪಡೆದು ಹೊರಕ್ಕೆ ಬಂದಿದ್ದ ಅವರು ಈಗ ಮತ್ತೆ ಜೈಲಿಗೆ ಹೋಗಬೇಕಾಯಿತು. ಅಂದು ಸಾರಥಿ ಯಶಸ್ಸು ಕಂಡಂತೆ, ಇಂದು ರಿಲೀಸ್ ಆಗಿರುವ ‘ಡೆವಿಲ್’ ಸಿನಿಮಾ ಯಶಸ್ಸು ಕಾಣುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.