ADVERTISEMENT

Sandalwood: ನಟ ಧನಂಜಯ ಮುಕ್ತ ಮಾತು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 23:30 IST
Last Updated 5 ಫೆಬ್ರುವರಿ 2026, 23:30 IST
ಧನಂಜಯ 
ಧನಂಜಯ    

ನಟ ಧನಂಜಯ ಇತ್ತೀಚೆಗೆ ಸಿನಿಮಾ ಪತ್ರಕರ್ತರಿಗೆ ಮುಕ್ತವಾಗಿ ಮಾತಿಗೆ ಸಿಕ್ಕರು. ಈ ಸಂದರ್ಭದಲ್ಲಿ ಸಿನಿಪಯಣ, ವೈಯಕ್ತಿಕ ಜೀವನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾದ ತಮ್ಮ ವಿಷಯದ ಬಗ್ಗೆ ಮಾತಿಗಿಳಿದರು. 

*ನಾನು ಬಹಳ ಮುಗ್ಧವಾಗಿ, ಪ್ರೀತಿಯಿಂದ ಕರೆದ ಸ್ನೇಹಿತನ ‘ಅಪ್ಪುಸ್‌ ಬಿರಿಯಾನಿ’ ಉದ್ಘಾಟಿಸಿ, ಪ್ರೀತಿಯಿಂದ ಕೊಟ್ಟ ಊಟ ಮಾಡಿ ಬಂದೆ. ಈ ಹಿಂದೆ ಸುಮಾರು 10–15 ಬಿರಿಯಾನಿ ಅಂಗಡಿಗಳನ್ನು ನಾನೇ ಉದ್ಘಾಟಿಸಿದ್ದೇನೆ. ಈ ವಿಷಯ ಈಗ ಏಕೆ ಎತ್ತಿಕೊಂಡು ಚರ್ಚಿಸಿದರೋ ಗೊತ್ತಿಲ್ಲ. ಈ ವಿಚಾರವಾಗಿ ಸಮುದಾಯಗಳನ್ನು ಎಳೆದಿರುವುದು ಬೇಡವಿತ್ತು. ಇಂಥ ವಿಚಾರಗಳು ಮೊದಲು ಬಹಳ ಪರಿಣಾಮ ಬೀರುತ್ತಿತ್ತು. ಈಗ ಇಲ್ಲ. ನನ್ನ ಊಟ, ತಿಂಡಿ ಅಥವಾ ಚಟ ಎಲ್ಲವೂ ನನ್ನ ವೈಯಕ್ತಿಕ. ಕದ್ದು ಮುಚ್ಚಿ ತಿನ್ನಲು ಮಾಡುತ್ತಿರುವುದು ಅಪರಾಧವೇನಲ್ಲ. ಇಷ್ಟವಾಗುವುದನ್ನು ಚೆನ್ನಾಗಿ ತಿನ್ನುತ್ತೇನೆ. ನಾನು ಯುವಕನಾಗಿದ್ದಾಗ ‘ಬಿಯರ್‌ ಬಾಯ್‌’ ಎಂದೇ ಖ್ಯಾತಿ ಹೊಂದಿದ್ದೆ. ಸಿಗರೇಟ್‌ ಸೇದುತ್ತಿದ್ದೆ. ಈಗ ನಿಲ್ಲಿಸಿದ್ದೇನೆ. ಈ ಅಭ್ಯಾಸಗಳನ್ನು ಇಟ್ಟುಕೊಳ್ಳಿ ಎನ್ನುವುದಿಲ್ಲ. ಅಭ್ಯಾಸವಿದ್ದರೂ ಇತಿಮಿತಿ ಇರಲಿ ಎಂದು ಕಿವಿಮಾತು ಹೇಳುತ್ತೇನೆ.   

*ಡಾಲಿ ಸಿನಿಮಾ ಕ್ಷೇತ್ರದಲ್ಲಿ ಏನು ಮಾಡುತ್ತಿದ್ದಾನೆ ಎನ್ನುವುದು ಚರ್ಚೆಯಾಗುತ್ತಿಲ್ಲ. ಇದು ಬೇಸರದ ವಿಷಯ. ಹೀಗಾಗಿ ಮಾತನಾಡಲೇಬೇಕು ಎಂದೆನಿಸಿತು. ನಟನಾಗಿ ಬಂದು ನನಗಾಗಿ ನಿರ್ಮಾಣ ಸಂಸ್ಥೆ ಆರಂಭಿಸಿದೆ. ಬಳಿಕ ಹೊಸಬರಿಗಾಗಿ ‘ಟಗರುಪಲ್ಯ’, ‘ವಿದ್ಯಾಪತಿ’, ‘ಜೆಸಿ’, ‘ಹೆಗ್ಗಣ ಮುದ್ದು’ ‌ಸಿನಿಮಾಗಳನ್ನು ಮಾಡಿದ್ದೇನೆ. ‘ಮದರ್‌ ಪ್ರಾಮಿಸ್‌’ ಎನ್ನುವ ಇನ್ನೊಂದು ಸಿನಿಮಾ ನಿರ್ಮಾಣವಾಗುತ್ತಿದೆ. ‘ಜೀ’ಗಾಗಿ ಒಂದು ವೆಬ್‌ ಸರಣಿ ಮಾಡುತ್ತಿದ್ದೇನೆ. ‘ಡೇರ್‌ಡೆವಿಲ್‌ ಮುಸ್ತಾಫಾ’ ಹಾಗೂ ‘ಆರ್ಕೆಸ್ಟ್ರಾ’ ಸಿನಿಮಾಗಳನ್ನು ಪ್ರಸ್ತುತಪಡಿಸಿ ಬಿಡುಗಡೆ ಮಾಡಿದ್ದೇನೆ. ಇದರಲ್ಲಿ ಬಹುತೇಕ ಯಶಸ್ವಿಯಾಗಿವೆ. ಈ ಅಪಾಯವನ್ನು ತೆಗೆದುಕೊಳ್ಳುತ್ತಿರುವುದರ ಬಗ್ಗೆ, ಕೆಲಸಗಳ ಬಗ್ಗೆ ಮಾತನಾಡಬೇಕಲ್ಲವೇ?  

ADVERTISEMENT

*ಶಂಕರ್‌ಗುರು ನಿರ್ದೇಶನದ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾದ ಶೂಟಿಂಗ್‌ ಕೊನೆಯ ಹಂತದಲ್ಲಿದೆ. ಹೇಮಂತ್‌ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಶೂಟಿಂಗ್‌ ಪ್ರಗತಿಯಲ್ಲಿದೆ. ಸುಕೇಶ್ ನಾಯಕ್ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಹಲಗಲಿ’ಯ ಶೂಟಿಂಗ್‌ ಶೇಕಡ 40ರಷ್ಟು ಪೂರ್ಣಗೊಂಡಿದೆ. ಇದು ಶೀಘ್ರದಲ್ಲೇ ಪುನರಾರಂಭವಾಗಲಿದೆ. ಶಶಾಂಕ್‌ ಸೋಗಾಲ್‌ ನಿರ್ದೇಶನದ ‘ಜಿಂಗೋ’ ಲೈನ್‌ಅಪ್‌ನಲ್ಲಿದೆ. ‘ಉತ್ತರಕಾಂಡ’ ಸಿನಿಮಾ ಮಾಡಲಿದ್ದೇವೆ. ಸದ್ಯದಲ್ಲೇ ಇದರ ಅಪ್‌ಡೇಟ್‌ ಸಿಗಲಿದೆ. ಕೆಲಸ ನಿರಂತರವಾಗಿದೆ. ಪ್ರೇಕ್ಷಕರು ಹೊಸಬರಿಗೆ ಜಾಗ ಕೊಡಬೇಕು.

*ತಂದೆಯಾಗುತ್ತಿದ್ದೇನೆ. ಮಗುವನ್ನು ಕೈಯಲ್ಲಿ ಹಿಡಿಯಲು ಕಾತುರನಾಗಿದ್ದೇನೆ. ಮದುವೆಯಾಗದ ಸ್ನೇಹಿತರಿಗೆ ಮದುವೆಯಾಗುವ ಸಲಹೆ ನೀಡುತ್ತಿದ್ದೇನೆ. ಮಗುವಿಗೆ ಸಮಯ ನೀಡುವ ಸಲುವಾಗಿ ಮೇ ಒಳಗೆ ಮೂರು ಸಿನಿಮಾಗಳನ್ನು ಪೂರ್ಣಗೊಳಿಸಲಿದ್ದೇನೆ. 

*ಸೋಲುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ‘ವಿದ್ಯಾಪತಿ’ ಚಿತ್ರಮಂದಿರಗಳಲ್ಲಿ ಸೋತಿದೆ. ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗದೇ ಇರಬಹುದು. ಆದರೆ ಮೋಸ ಮಾಡಿದ್ದೇವೆ ಎಂದು ಪ್ರೇಕ್ಷಕರಿಗೆ ಅನಿಸಬಾರದು. ಸೋತೆವು ಎಂದು ನಿರ್ಮಾಣ ನಿಲ್ಲಿಸಲು ಸಾಧ್ಯವಿಲ್ಲವಲ್ಲ. ವಿಮರ್ಶೆಗಳಿಗೆ ಎಲ್ಲರೂ ತೆರೆದುಕೊಂಡಿರಬೇಕು. ಇಲ್ಲದೇ ಇದ್ದರೆ ತಿದ್ದುಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಬೇರೆಯವರ ಸಿನಿಮಾಗಳಿಗೆ ನೆಗೆಟಿವ್‌ ಮಾಡಿಸುವುದೇ ಇಂದು ಕೆಲಸವಾಗಿದೆ. ನಿರ್ದೇಶನ ಮಾಡುವುದು ಇಷ್ಟ. ಆದರೆ ಅದೊಂದು ದೊಡ್ಡ ಜವಾಬ್ದಾರಿ. ನಿರ್ದೇಶನ ಮಾಡುವ ವಿಶ್ವಾಸ ಮೂಡಿದ ದಿನ ಕೈಗೆತ್ತಿಕೊಳ್ಳುತ್ತೇನೆ.