ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವಸಂತಗಳನ್ನು ಪೂರ್ಣಗೊಳಿಸಿರುವ ಸಂಭ್ರಮವನ್ನು ಆಚರಿಸಲು ಮತ್ತು ತಮ್ಮ ನಟನೆಯ ಬಹು ನಿರೀಕ್ಷೆಯ ಚಿತ್ರ ‘ಪ್ಯಾಂಟಮ್’ನ ಬದಲಾದ ಶೀರ್ಷಿಕೆಯ ಲೋಗೊ ಮತ್ತು ಚಿತ್ರದ 180 ಸೆಕೆಂಡುಗಳ ಟೀಸರ್ ಹಾಗೂ ‘ವಿಕ್ರಾಂತ್ ರೋಣ’ ಕಟೌಟ್ ಅನಾವರಣಗೊಳಿಸಲು ದುಬೈಯಲ್ಲಿಬೀಡು ಬಿಟ್ಟಿದ್ದಾರೆ.
ಇಂದು ರಾತ್ರಿ ನಡೆಯುವ ವರ್ಣರಂಜಿತ ಕಾರ್ಯಕ್ರಮಕ್ಕೂ ಕೆಲವೇ ಗಂಟೆಗಳ ಮೊದಲು ದುಬೈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಮಾಧ್ಯಮ ಪ್ರತಿನಿಧಿಯೊಬ್ಬರು ಒಂದು ಹಾಡನ್ನು ಹಾಡುವಂತೆ ಕೇಳಿದಾಗ, ಕನ್ನಡ ಚಿತ್ರದ ಹಾಡೊಂದನ್ನು ಹಾಡಿ, ಕನ್ನಡದ ಕಂಪನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲೂ ಹರಡಿದ್ದಾರೆ.
‘ಜಿಮ್ಮಿಗಲ್ಲು’ ಚಿತ್ರಕ್ಕೆ ಚಿ. ಉದಯ್ ಶಂಕರ್ ರಚಿಸಿ ಹಾಗೂ ನಟ ವಿಷ್ಣುವರ್ಧನ್ ಹಾಡಿದ್ದ ‘ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ’ ಹಾಡಿನ ಸಾಲುಗಳನ್ನು ಹಾಡಿ, ವಿಷ್ಣುವರ್ಧನ್ ನನ್ನ ನೆಚ್ಚಿನ ನಟ ಎಂದು ಕೊಂಡಾಡಿದ್ದಾರೆ.
ಚಂದನವನದಿಂದ ವೃತ್ತಿ ಬದುಕು ಆರಂಭಿಸಿ 25 ವಸಂತಗಳನ್ನು ಸಾರ್ಥಕವಾಗಿ ಪೂರ್ಣಗೊಳಿಸಿರುವ ಕಿಚ್ಚ ಭಾರತೀಯ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿರುವ ನಟ. ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದ ಕಲಾವಿದರು ಕಿಚ್ಚನಿಗೆ ಶುಭ ಹಾರೈಸಿದ್ದಾರೆ.
ರಮೇಶ್ ಅರವಿಂದ್, ಉಪೇಂದ್ರ, ಮೋಹನ್ಲಾಲ್, ಗಣೇಶ್, ರಕ್ಷಿತ್ ಶೆಟ್ಟಿ, ರಮ್ಯಾಕೃಷ್ಣ, ಪ್ರಿಯಾಮಣಿ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ನಟ– ನಟಿಯರು ಸುದೀಪ್ಗೆ ಶುಭ ಹಾರೈಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.