ADVERTISEMENT

ಮೊದಲು ಮಾನವನಾಗು; ತೆಲುಗು ನಟನಿಗೆ ಪುನೀತ್ ರಾಜ್‌ಕುಮಾರ್ ಎಚ್ಚರಿಕೆ!

ಏಜೆನ್ಸೀಸ್
Published 13 ಡಿಸೆಂಬರ್ 2020, 3:16 IST
Last Updated 13 ಡಿಸೆಂಬರ್ 2020, 3:16 IST
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್   

ಬೆಂಗಳೂರು: ಕರುನಾಡಿನ ಮೇರು ನಟ ಡಾ. ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜ್ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ತೆಲುಗು ನಟ ಕ್ಷಮೆ ಕೇಳಿ ತಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ಎಚ್ಚರಿಸಿದ್ದಾರೆ.

ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ, ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” ಎಂದು ಹೇಳಿದರು.

ಯಾವುದೇ ಭಾಷೆಯ ನಟನಾದರೂ ಸರಿ ಮೊದಲು ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ತೋರಬೇಕು ಎಂದು ಪುನೀತ್ ರಾಜಕುಮಾರ್ ಹೇಳಿದರು. 'ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ನಟರಾದರು ಗೌರವ ಮೊದಲು' ಎಂದು ಹೇಳಿದರು.

ತೆಲುಗು ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ಡಾ. ವಿಷ್ಣುವರ್ಧನ್ ಬಗ್ಗೆ ಅವಹೇಳಕಾರಿ ಮಾತುಗಳನ್ನು ಆಡಿದ್ದು, ಪ್ರಸ್ತುತ ಕನ್ನಡ ನಾಡಿನ ಕಲಾ ಪ್ರೇಮಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ನಟ ಕಿಚ್ಚ ಸುದೀಪ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ವಿಷ್ಣು ಇದ್ದಾಗ ಅವರ ಬಗ್ಗೆ ಮಾತನಾಡಿದ್ದರೆ ಗಂಡಸ್ತನ ಇರುತ್ತಿತ್ತು. ಅವರಿಲ್ಲದಾಗ ಮಾತಾಡಿರುವುದು ತಪ್ಪು. ಅವರಿಗೆ ಎಚ್ಚರಿಕೆ ನೀಡಿದ್ದೆ ಎಂಬ ಮಾತು ಹಿಂಪಡೆಯಬೇಕು. ಸಿನಿಮಾ ರಂಗವೂ ಒಟ್ಟಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂಥ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಿರುವುದರಿಂದ ಎಲ್ಲವೂ ಚೂರು ಚೂರಾಗಿ ಒಡೆದು ಹೋಗುತ್ತದೆ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.