ನಟ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ ಏ.1ಕ್ಕೆ ತೆರೆಕಾಣುತ್ತಿದೆ. ಚಿತ್ರ ಬಿಡುಗಡೆಯ ಹೊಸ್ತಿಲಲ್ಲೇ ಉಪೇಂದ್ರ ಅವರು ನಟರಾದ ಸುದೀಪ್, ಯಶ್, ಗಣೇಶ್ ಹಾಗೂ ಪ್ರಜ್ವಲ್ ದೇವರಾಜ್ ಅವರಿಗೆ ಸವಾಲೊಂದನ್ನು ಎಸೆದಿದ್ದಾರೆ. ಜನರೂ ಈ ಸವಾಲು ಸ್ವೀಕರಿಸುವಂತೆ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಮನೆಯ ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು, ಹೆಂಡತಿಯ ತಲೆಗೆ ಮಸಾಜ್ ಮಾಡುವುದು, ಈರುಳ್ಳಿ ಕತ್ತರಿಸುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವ ಸವಾಲನ್ನು ಈ ನಟರಿಗೆ ಹಾಗೂ ಜನರಿಗೆ ಉಪೇಂದ್ರ ನೀಡಿದ್ದಾರೆ. ಈ ಸವಾಲು ಒಪ್ಪಿ ಅತ್ಯುತ್ತಮ ರೀಲ್ಸ್ ಮಾಡಿದ ಮೂವರಿಗೆ ಚಿತ್ರದ ಮೊದಲ ಪ್ರದರ್ಶನದ ಟಿಕೆಟ್ ಹಾಗೂ ಉಪೇಂದ್ರ ಜೊತೆ ಭೋಜನ ಸವಿಯುವ ಅವಕಾಶ ಸಿಗಲಿದೆ. ರೀಲ್ಸ್ ಮಾಡಿ ನನ್ನನ್ನು ಟ್ಯಾಗ್ ಮಾಡಿ ಎಂದು ಉಪೇಂದ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ.
‘ಐ ಲವ್ ಯು’ ಸಿನಿಮಾ ಬಳಿಕ ಸುಮಾರು ಮೂರು ವರ್ಷಗಳ ನಂತರ ಉಪೇಂದ್ರ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಹೋಮ್ ಮಿನಿಸ್ಟರ್’ ಸಿನಿಮಾ ಟ್ರೇಲರ್ ಮೂಲಕವೇ ಸದ್ದು ಮಾಡುತ್ತಿದ್ದು, ಸಿನಿಮಾದಲ್ಲಿ ಹಲವು ಭಿನ್ನ ಗೆಟಪ್ಗಳಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಸುಜಯ್ ಕೆ. ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ವೇದಿಕ ನಟಿಸಿದ್ದು, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.