ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಈಗಾಗಲೇ, ಇದರ ಶೇಕಡ 90ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ ಬಾಕಿ ಉಳಿದಿರುವ ಚಿತ್ರೀಕರಣವನ್ನು ಆಗಸ್ಟ್ 26ರಿಂದ ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ.
ಒಟ್ಟು ಇಪ್ಪತ್ತು ದಿನಗಳ ಕಾಲ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ಮಿನರ್ವ್ ಮಿಲ್ನಲ್ಲಿ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಅಳವಡಿಸಲಾಗಿದೆ. ರಾಕಿ ಭಾಯ್ ಮತ್ತು ಅಧೀರನ ನಡುವಿನ ಫೈಟಿಂಗ್ ಸೇರಿದಂತೆ ಕೆಲವು ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಇದೆಯಂತೆ.
ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಚಿತ್ರೀಕರಣಕ್ಕೆ ಚಿತ್ರತಂಡ ನಿರ್ಧರಿಸಿತ್ತು. ಈ ನಡುವೆಯೇ ಚಿತ್ರದಲ್ಲಿ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಇರುವ ಸುದ್ದಿ ಬೆಳಕಿಗೆ ಬಂದಿದ್ದೇ ಶೂಟಿಂಗ್ ವಿಳಂಬವಾಗಲು ಕಾರಣವಾಯಿತಂತೆ.
ಸಂಜಯ್ ದತ್ ಅವರು ಮುಂಬೈನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಅವರು ಚಿಕಿತ್ಸೆ ಪಡೆದು ಮರಳಿದ ಬಳಿಕ ಅಧೀರ ಮತ್ತು ರಾಕಿ ಬಾಯ್(ಯಶ್) ನಡುವಿನ ಅಂತಿಮ ಕದನದ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ಲಾಕ್ಡೌನ್ ಘೋಷಣೆಗೂ ಮೊದಲೇ ಚಿತ್ರತಂಡ ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು. ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಾದ ಚಿತ್ರತಂಡಕ್ಕೆ ಕೋವಿಡ್–19 ಬಿಸಿ ತಟ್ಟಿತು. ಈಗ ಸರ್ಕಾರದ ಮಾರ್ಗಸೂಚಿ ಅನ್ವಯ ಶೂಟಿಂಗ್ ನಡೆಸಲು ಸಿದ್ಧತೆ ನಡೆಸಿದೆ. ಪ್ರಸ್ತುತ ಪೂರ್ಣಗೊಂಡಿರುವ ಶೂಟಿಂಗ್ನ ಎಡಿಟಿಂಗ್, ಕಲರಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ರಾಕಿ ಬಾಯ್ ನರಾಚಿ ಗಣಿ ಪ್ರವೇಶಿಸಿ ಗರುಡನನ್ನು ಹತ್ಯೆ ಮಾಡುವುದರೊಂದಿಗೆ ‘ಕೆಜಿಎಫ್ ಚಾಪ್ಟರ್ 1’ರ ಕಥೆ ಪೂರ್ಣಗೊಂಡಿತ್ತು. ಹಾಗಾಗಿ, ನರಾಚಿಯಲ್ಲಿ ರಾಕಿಯ ಅಬ್ಬರ ಹಾಗೂ ಅಧೀರನೊಟ್ಟಿಗೆ ಆತನ ಸೆಣಸಾಟ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರವಿ ಬಸ್ರೂರ್ ಇದಕ್ಕೆ ಸಂಗೀತ ನೀಡಿದ್ದು, ಶೇಕಡ 60ರಷ್ಟು ಕೆಲಸ ಪೂರ್ಣಗೊಂಡಿದೆಯಂತೆ. ಬಾಲಿವುಡ್ ನಟಿ ರವೀನಾ ಟಂಡನ್ ಅವರು, ರಮಿಕಾ ಸೇನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಯಶ್ಗೆ ನಾಯಕಿಯಾಗಿ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.