ಚೆನ್ನೈ: ಶುಕ್ರವಾರ ನಿಧನರಾಗಿದ್ದ ಬಹುಭಾಷಾ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ, ಅಸಂಖ್ಯ ಅಭಿಮಾನಿಗಳ ದುಃಖದ ನಡುವೆ ತಾಮರೈಪಕ್ಕಂನ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ತಮಿಳುನಾಡು ಪೊಲೀಸರು ಗೌರವವಂದನೆ ಸಲ್ಲಿಸಿದರು.ಎಸ್.ಪಿ.ಬಿ ಅವರ ಪುತ್ರ ಎಸ್.ಪಿ.ಚರಣ್ ಅವರು ಅಂತಿಮ ವಿಧಿವಿಧಾನ ನಡೆಸಿದರು. ಧಾರ್ಮಿಕ ಮಂತ್ರಗಳನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು. ಪೊಲೀಸರ ಪಥ ಸಂಚಲನದೊಂದಿಗೆ ಶವವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು.
ಅಂತ್ಯಕ್ರಿಯೆ ನಡೆದ ತಿರುವಳ್ಳುವರ್ ಜಿಲ್ಲೆಯಲ್ಲಿರುವ ಫಾರ್ಮ್ ಹೌಸ್ ಬಳಿ ಎಸ್.ಪಿ.ಬಿ. ಅವರ ಅಸಂಖ್ಯ ಅಭಿಮಾನಿಗಳು ಸೇರಿದ್ದರು. ಮುಂಜಾಗ್ರತೆಯಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
'ಪಾಡುಂ ನಿಲಾ' (ಹಾಡುವ ಚಂದ್ರ) ಎಂದು ಅಭಿಮಾನದಿಂದ ಕರೆಯಿಸಿಕೊಳ್ಳುವ ಎಸ್.ಪಿ.ಬಿ ಅವರು ಅನಾರೋಗ್ಯ ಪೀಡಿತರಾದ ಬಳಿಕ ಇಲ್ಲಿನ ಎಂ.ಜಿ.ಆರ್.ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ನಿಧನರಾಗಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.