
ಧನುಷ್
ಚಿತ್ರ: ಇನ್ಸ್ಟಾಗ್ರಾಂ
ಕನ್ನಡದ ಬಿಗ್ಬಾಸ್ ಸೀಸನ್ 12ರ ಮೊದಲ ಫೈನಲಿಸ್ಟ್ ಆಗಿ ಧನುಷ್ ಗೌಡ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ಬಾಸ್ ಸೀಸನ್ 12ರ ವಿಜೇತರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಮನೆಮಾಡಿದೆ. ಧನುಷ್ ಅವರು ಫಿನಾಲೆ ತಲುಪುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಧನುಷ್ ಗೌಡ ಬಿಗ್ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಕಳೆದ ವಾರ ಕೂಡ ಧನುಷ್ ಕ್ಯಾಪ್ಟನ್ ಆಗಿದ್ದರು. ಅದೃಷ್ಟ ಎಂಬಂತೆ ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಉಪಯೋಗಪಡಿಸಿಕೊಂಡು ಕೊನೆಯ ಟಾಸ್ಕ್ನಲ್ಲಿ ಜಯಶಾಲಿ ಆಗುವ ಮೂಲಕ ಅವರು ಫಿನಾಲೆ ತಲುಪಿದ್ದಾರೆ.
ಬಿಗ್ಬಾಸ್ ಕೊಟ್ಟಿರುವ ಟಾಸ್ಕ್ನಲ್ಲಿ ಅಶ್ವಿನಿ ಗೌಡ, ಧನುಷ್, ರಘು, ಕಾವ್ಯ ಶೈವ ಅವರು ಭಾಗಿಯಾಗಿದ್ದರು. ಈ 4 ಮಂದಿಯಲ್ಲಿ ಯಾವ ಸ್ಪರ್ಧಿ ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸುತ್ತಾರೋ ಅವರು ಮೊದಲ ಫೈನಲಿಸ್ಟ್ ಆಗಲಿದ್ದಾರೆ ಎಂದು ಬಿಗ್ಬಾಸ್ ಘೋಷಿಸಿದ್ದರು. ಕೊನೆಯಲ್ಲಿ 7.29 ನಿಮಿಷಗಳಲ್ಲಿ ಟಾಸ್ಕ್ ಮುಗಿಸಿದ್ದ ಧನುಷ್ ಅವರು ಫಿನಾಲೆಗೆ ಟಿಕೆಟ್ ಪಡೆದರು. ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಅವರು ಹೆಚ್ಚು ಖುಷಿಪಟ್ಟರು.
ಧನುಷ್ ಹಾಗೂ ರಾಶಿಕಾ
ಧನುಷ್ ಅವರ ಟಾಸ್ಕ್ಗೆ ರಾಶಿಕ ಸಹಾಯ ಮಾಡಿದ್ದರು. ಹೀಗಾಗಿ ಧನುಷ್ ಫೈನಲಿಸ್ಟ್ ಆಗಿದ್ದಕ್ಕೆ ರಾಶಿಕಾ ಕುಣಿದು ಕುಪ್ಪಳಿಸಿದ್ದಾರೆ. ಇದಕ್ಕೆ ಧನುಷ್ ಅವರು ಕೂಡ ರಾಶಿಕಾಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈಗ ಬಿಗ್ಬಾಸ್ ಮನೆಯಲ್ಲಿ ರಾಶಿಕಾ, ಧನುಷ್, ಅಶ್ವಿನಿ ಗೌಡ, ರಘು, ಕಾವ್ಯ, ಧ್ರುವಂತ್, ರಕ್ಷಿತಾ ಹಾಗೂ ಗಿಲ್ಲಿ ಉಳಿದುಕೊಂಡಿದ್ದಾರೆ. ಇವರುಗಳ ಪೈಕಿ ಒಬ್ಬ ಸ್ಪರ್ಧಿ ಬಿಗ್ಬಾಸ್ ಮನೆಗೆ ವಿದಾಯ ಹೇಳಲಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಶನಿವಾರದ ಸಂಚಿಕೆಯ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾಗೆ, ‘ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.