ಡಿಕೆಶಿ, ಸುದೀಪ್
ಬೆಂಗಳೂರು: ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಷೋ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ಗೆ ಜಿಲ್ಲಾಡಳಿತ ಹಾಕಿದ್ದ ಬೀಗಮುದ್ರೆ ತೆಗೆಯುವಂತೆ ನೀಡಿದ ಆದೇಶವನ್ನು ಶೋ ನಿರೂಪಕ ಕಿಚ್ಚ ಸುದೀಪ್ ಅವರು ಸ್ವಾಗತಿಸಿದ್ದಾರೆ.
ಬೀಗಮುದ್ರೆ ತೆಗೆಯುವಂತೆ ನಿರ್ದೇಶನ ನೀಡಿದ ಡಿಸಿಎಂ ಡಿಕೆಶಿ ಹಾಗೂ ಸಹಾಯ ನೀಡಿದ ಮೊಹಮ್ಮದ್ ನಲಪಾಡ್ ಅವರಿಗೆ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಡಿಸಿಎಂ ಡಿಕೆಶಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿ ಎಕ್ಸ್ ಪೋಸ್ಟ್ ಹಂಚಿಕೊಂಡಿರುವ ಸುದೀಪ್, ‘ಸಕಾಲಕ್ಕೆ ನನ್ನ ಕರೆಗೆ ಸ್ಪಂದಿಸಿದ ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಈ ಗೊಂದಲದಲ್ಲಿ ಬಿಗ್ ಬಾಸ್ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ನಲಪಾಡ್ ಅವರಿಗೂ ಧನ್ಯವಾದ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ರಾತ್ರಿ 11.42ಕ್ಕೆ ಪೋಸ್ಟ್ ಹಾಕಿದ್ದರು.
‘ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಡಿಸಿಎಂ ತಿಳಿಸಿದ್ದರು.
ಡಿಸಿಎಂ ಸೂಚನೆಯ ಬೆನ್ನಲ್ಲೇ ಕಂದಾಯ ಇಲಾಖೆಯ ಸಿಬ್ಬಂದಿ, ಜಾಲಿವುಡ್ ಸ್ಟುಡಿಯೋಸ್ಗೆ ತೆರಳಿ ಬೀಗಮುದ್ರೆ ತೆಗೆದರು. ಸಿ ಗೇಟ್ ಮಾತ್ರ ತೆಗೆಯಲಾಗಿದೆ ಎನ್ನಲಾಗಿದ್ದು, ಸ್ಟುಡಿಯೊದ ಇತರ ಚಟುವಟಿಕೆಗಳಿಗೆ ನಿರ್ಬಂಧ ಇದೆ ಎಂದು ತಿಳಿದು ಬಂದಿದೆ.
ಈಗಲ್ಟನ್ ರೆಸಾರ್ಟ್ನಲ್ಲಿದ್ದ ಬಿಗ್ ಬಾಸ್ ಸ್ಪರ್ಧಿಗಳು ಸ್ಟುಡಿಯೊಗೆ ವಾಪಸಾಗಿದ್ದು ಶೋ ಚಿತ್ರೀಕರಣ ಸರಾಗವಾಗಿ ನಡೆದಿದೆ ಎಂದು ಮೂಲಗಳು ತಿಳಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.