ADVERTISEMENT

ಒಳನೋಟ: ನೆಮ್ಮದಿ ತಂದ ಹವಾಮಾನ ಆಧರಿತ ಬೆಳೆ ವಿಮೆ

ಪ್ರವೀಣ ಕುಮಾರ್ ಪಿ.ವಿ.
Published 9 ಜುಲೈ 2022, 19:30 IST
Last Updated 9 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಗೆ ಮಳೆಗಾಲದಲ್ಲಿ ಕೊಳೆರೋಗ ಬಾಧಿಸುವುದರಿಂದ ಬೆಳೆಗಾರರು ಪ್ರತಿ ವರ್ಷವೂ ಸಮಸ್ಯೆ ಎದುರಿಸು ತ್ತಾರೆ. ಹವಾಮಾನ ಆಧರಿತ ಬೆಳೆ ವಿಮೆ ಪದ್ಧತಿ ಜಾರಿಯಾದ ಬಳಿಕ ಬೆಳೆಗಾರರಲ್ಲಿ ಕೊಳೆರೋಗದ ಚಿಂತೆ ತುಸು ಕಡಿಮೆಯಾಗಿದೆ.

ಬೆಳೆಗೆ ಹೆಕ್ಟೇರ್‌ಗೆ ₹1.28 ಲಕ್ಷ ವಿಮೆ ಕಂತು ಪಾವತಿಸಬೇಕು. ಅದರಲ್ಲಿ ₹6,400 ಪ್ರೀಮಿಯಂ ಅನ್ನು ರೈತರು ಕಟ್ಟಿದರೆ ಶೇ 95ರಷ್ಟು ಮೊತ್ತ ಸರ್ಕಾರವೇ ಭರಿಸುತ್ತದೆ. ಜುಲೈ 1ರಿಂದ ಜೂನ್‌ 30ರ (ಒಂದು ವರ್ಷ) ಅವಧಿಯಲ್ಲಿ ಹವಾಮಾನದಲ್ಲಿ ಏರುಪೇರಾದರೆ ಬೆಳೆಗಾರರು ವಿಮಾ ಪರಿಹಾರ ಮೊತ್ತ ಪಡೆಯುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97,491 ಹೆಕ್ಟೇರ್‌ ಅಡಿಕೆ ಪ್ರದೇಶ ಇದೆ. 2017ರಲ್ಲಿ 1,902 ಘಟಕಗಳಿಗೆ ₹ 3.51 ಕೋಟಿ, 2018ರಲ್ಲಿ 14,553 ಘಟಕಗಳಿಗೆ ₹39.74 ಕೋಟಿ, 2020ರಲ್ಲಿ 54,775 ಘಟಕಗಳಿಗೆ ₹98.14 ಕೋಟಿ ಪಾವತಿ ಆಗಿದೆ.

ADVERTISEMENT

‘ಈ ಹಿಂದೆ ಅರ್ಜಿ ಸಲ್ಲಿಸಿ, ಅಧಿಕಾರಿಗಳು ಬಂದು ನಷ್ಟ ಅಂದಾಜು ಮಾಡಿದ ನಂತರ ಪರಿಹಾರ ಸಿಗುತ್ತಿತ್ತು. ಈಗ ಮಳೆಯಲ್ಲಿ ಏರುಪೇರಾದರೆ ಸಾಕು, ಕೊಳೆರೋಗ ಬಾಧಿಸದಿದ್ದರೂ ವಿಮೆ ಮೊತ್ತ ಸಿಗುತ್ತದೆ. ಮೂರು ವರ್ಷಗಳಿಂದ ನಿರಂತರವಾಗಿ ಪರಿಹಾರ ಪಡೆದಿದ್ದೇನೆ’ ಎಂದು ಪುತ್ತೂರು ತಾಲ್ಲೂಕು ಕಡೆಮಜಲಿನ ಸುಭಾಷ್‌ ರೈ ತಿಳಿಸಿದರು.

ಹವಾಮಾನ ಏರುಪೇರಿಗೆ ಸಂಬಂಧಿಸಿ ಈ ಹಿಂದೆ ನಿರ್ದಿಷ್ಟ ಹೋಬಳಿಯ ಅಂಕಿ ಅಂಶಗಳ ಆಧಾರದಲ್ಲಿ ವಿಮೆ ಮೊತ್ತ ನಿಗದಿಪಡಿಸಲಾಗುತ್ತಿತ್ತು. ಆಗ ಕೆಲವೊಂದು ಕಡೆ ನಿರಂತರ ಮಳೆಯಾಗಿದ್ದರೂ ಅದು ಸಂಬಂಧಪಟ್ಟ ಹವಾಮಾನ ಕೇಂದ್ರದಲ್ಲಿ ದಾಖಲಾಗದಿದ್ದರೆ ಬೆಳೆಗಾರರು ಹವಾಮಾನ ವೈಪ ರೀತ್ಯದ ಪ್ರಕಾರ ವಿಮೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಆ ಸಮಸ್ಯೆ ನೀಗಿಸಲಾಗಿದೆ.

‘ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಮಳೆ ಹಾಗೂ ಉಷ್ಣಾಂಶದ ಆಧಾರದಲ್ಲಿ ಪರಿಹಾರ ನಿಗದಿಪಡಿಸಲಾಗುತ್ತದೆ. ಈ ಯೋಜನೆಗೆ ಉತ್ತಮ ಸ್ಪಂದನೆ ಇದೆ‌’ ಎಂದು ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಎಚ್‌.ಆರ್‌.ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.