ADVERTISEMENT

ಚಳಿಗಾಲದಲ್ಲಿ ಪಾದಗಳ ಒಡಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 13:06 IST
Last Updated 14 ನವೆಂಬರ್ 2025, 13:06 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಚಳಿಗಾಲದ ಶೀತ ವಾತಾವರಣ ಹಾಗೂ ಶುಷ್ಕ ಗಾಳಿಯಿಂದಾಗಿ ಪಾದಗಳ ಚರ್ಮ ಒಣಗಿ ಬಿರುಕು ಉಂಟಾಗುತ್ತದೆ. ಈ ಬಿರುಕುಗಳು ನೋವು ಉಂಟು ಮಾಡುದರ ಜೊತೆಗೆ ಮುಜೂಗರಕ್ಕೂ ಕಾರಣವಾಗಬಹುದು. ಹಾಗಿದ್ದರೆ, ಚಳಿಗಾಲದಲ್ಲಿ ಪಾದಗಳ ಬಿರುಕಿಗೆ ಕಾರಣ ಮತ್ತು ಪರಿಹಾರಗಳೇನು ಎಂಬುದನ್ನು ತಿಳಿಯೋಣ.

ಪಾದ ಒಡೆಯಲು ಕಾರಣಗಳು: 

ADVERTISEMENT

ಚಳಿಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕಡಿಮೆಯಾತ್ತದೆ. ಇದರಿಂದಾಗಿ ಚರ್ಮ ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹೆಚ್ಚು ಬಿಸಿಯುಳ್ಳ ನೀರಿನಲ್ಲಿ ಸ್ನಾನ ಮಾಡುವುದು, ದೇಹಕ್ಕೆ ಸಾಕಾಗುವಷ್ಡು ನೀರು ಕುಡಿಯದಿರುವುದು ಹಾಗೂ ಚರ್ಮದ ಆರೈಕೆಯ ಕೊರತೆ ಈ ಸಮಸ್ಯೆಯನ್ನು ಮತ್ತಷ್ಟು  ಹೆಚ್ಚಿಸುತ್ತದೆ. ಅಲ್ಲದೇ ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಗಳು ಕೂಡ ಪಾದಗಳು ಒಡೆಯಲು ಕಾರಣವಾಗಬಹುದು.

ದೈನಂದಿನ ಆರೈಕೆಯ ವಿಧಾನಗಳು:

  • ಪ್ರತಿದಿನ ಸಂಜೆ ಸಮಯದಲ್ಲಿ ತುಸು ಬೆಚ್ಚಗಿರುವ ನೀರಿಗೆ ಉಪ್ಪು ಅಥವಾ ಗ್ಲಿಸರಿನ್ ಹಾಕಿ  15 ರಿಂದ 20 ನಿಮಿಷಗಳ ಕಾಲ ಪಾದಗಳನ್ನು ನೆನೆಸಬೇಕು. 

  • ನಂತರ ಮೃದುವಾದ ಟವೆಲ್‌ನಿಂದ ಪಾದಗಳನ್ನು ಒರೆಸಿ. ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಸ್ವಚ್ಛಗೊಳಿಸಿ. ಬೆರಳುಗಳ ಮಧ್ಯೆ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.

ಪರಿಹಾರಗಳೇನು? 

  • ತೆಂಗಿನ ಎಣ್ಣೆ ಮತ್ತು ಜೇನುತುಪ್ಪ: ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ, ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಬೇಕು. ಈ ಮಿಶ್ರಣವು ಚರ್ಮಕ್ಕೆ ಪೋಷಣೆ ನೀಡುತ್ತದೆ ಮತ್ತು ಪಾದದ ಬಿರುಕನ್ನು ಗುಣಪಡಿಸುತ್ತದೆ.

  • ಪೆಟ್ರೋಲಿಯಂ ಜೆಲ್ಲಿ: ಸ್ನಾನದ ನಂತರ ಪಾದಗಳು ತುಸು ತೇವವಿರುವಾಗಲೇ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದು ಅತ್ಯಂತ ಪರಿಣಾಮಕಾರಿ. ಇದನ್ನು ಹಚ್ಚುವುದರಿಂದ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯವಾಗುತ್ತದೆ.

  • ಅರಳಿ ಎಣ್ಣೆ: ಅರಳಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಚರ್ಮವು ಮೃದುವಾಗುತ್ತದೆ. ‘ವಿಟಮಿನ್ ಇ’ ಯುಕ್ತವಾದ ಈ ಎಣ್ಣೆ ಚರ್ಮಕ್ಕೆ ಪೋಷಣೆ ನೀಡುತ್ತದೆ.

  • ಎಕ್ಸ್‌ಫೋಲಿಯೇಷನ್ ಮತ್ತು ಸ್ಕ್ರಬಿಂಗ್: ವಾರಕ್ಕೆ ಎರಡು, ಮೂರು ಬಾರಿ ಪಾದಗಳಿಗೆ ಸ್ಕ್ರಬಿಂಗ್ ಮಾಡುವುದು ಅಗತ್ಯ. ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಮನೆಯಲ್ಲಿಯೇ ನೈಸರ್ಗಿಕ ಸ್ಕ್ರಬ್ ತಯಾರಿಸಬಹುದು. ಇದನ್ನು ವೃತ್ತಾಕಾರದ ಚಲನೆಯಲ್ಲಿ ಪಾದಗಳಿಗೆ ಹಚ್ಚಿ, ಬಳಿಕ ಉಜ್ಜಿ ತೊಳೆಯಿರಿ. 

  • ಸೂಕ್ತ ಆಹಾರ ಸೇವನೆ ಮತ್ತು ನೀರು ಕುಡಿಯುವುದು: ಚರ್ಮದ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ‘ವಿಟಮಿನ್ ಇ’, ‘ಒಮೆಗಾ-3’ ಹಾಗೂ ‘ಕೊಬ್ಬಿನಾಮ್ಲ’ ಸಮೃದ್ಧವಾಗಿರುವ ಆಹಾರಗಳಾದ ಬೀಜಗಳು, ಒಣ ಹಣ್ಣುಗಳು, ಮೀನು ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು.

  • ಪಾದರಕ್ಷೆಗಳ ಆಯ್ಕೆ: ಚಳಿಗಾಲದಲ್ಲಿ ಪಾದಗಳನ್ನು ಸಂಪೂರ್ಣವಾಗಿ ಮುಚ್ಚಿದ, ಆರಾಮದಾಯಕ ಪಾದರಕ್ಷೆಗಳನ್ನು ಧರಿಸಬೇಕು. ಹತ್ತಿ ಅಥವಾ ಉಣ್ಣೆಯ ಸಾಕ್ಸ್‌ ಧರಿಸುವುದರಿಂದ ಪಾದಗಳು ಬೆಚ್ಚಗೆ ಇಡಲು ಸಹಾಕಾರಿಯಾಗಿದೆ.  

  • ವೈದ್ಯಕೀಯ ಸಲಹೆ: ಒಂದು ವೇಳೆ ಪಾದದ ಬಿರುಕಿನಿಂದ ರಕ್ತಸ್ರಾವವಾದರೆ, ಸೋಂಕು ತಗುಲಿದ ಲಕ್ಷಣ ಕಂಡುಬಂದರೆ ಅಥವಾ ತೀವ್ರ ನೋವು ಇದ್ದರೆ, ತ್ವರಿತವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

  • ವಿಶೇಷವಾಗಿ ಮಧುಮೇಹ ರೋಗಿಗಳು ಪಾದಗಳ ಆರೈಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.

(ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞೆ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.