ನವದೆಹಲಿ: ಭಾರತದಲ್ಲಿರುವ ಶೇ 80ಕ್ಕೂ ಹೆಚ್ಚು ಅಂಗವಿಕಲರು ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ ಹಾಗೂ ಆರೋಗ್ಯ ಸುರಕ್ಷತೆಗೆ ಕಾನೂನುಬದ್ಧ ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅನೇಕರಿಗೆ ಮಾಹಿತಿ ಕೊರತೆ ಇದೆ ಎಂದು ವರದಿಯೊಂದು ತಿಳಿಸಿದೆ.
ಸಮಗ್ರ ಆರೋಗ್ಯ ಸುರಕ್ಷೆ: 'ಭಾರತದಲ್ಲಿ ಅಂಗವೈಕಲ್ಯ, ತಾರತಮ್ಯ ಮತ್ತು ಆರೋಗ್ಯ ವಿಮೆ' ಎಂಬ ವರದಿಯನ್ನು ಅಂಗವಿಕಲರ ಉದ್ಯೋಗದ ಉತ್ತೇಜನ ರಾಷ್ಟ್ರೀಯ ಕೇಂದ್ರದ ನಿರೂಪಕರು (NCPEDP) ಬಿಡುಗಡೆ ಮಾಡಿದ್ದಾರೆ.
34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 5 ಸಾವಿರಕ್ಕೂ ಹೆಚ್ಚು ಅಂಗವಿಕಲ ವ್ಯಕ್ತಿಗಳನ್ನು ಆಧಾರಿಸಿದ ಸಮೀಕ್ಷೆಯ ವರದಿ ಬಿಡುಗಡೆ ಮಾಡಲಾಗಿದೆ. ಅಂಗವಿಕಲರಿಗೆ ನೀಡುವ ಯೋಜನೆಗಳು ತಾರತಮ್ಯದಿಂದ ಕೂಡಿದೆ. ಸುಮಾರು 16 ಕೋಟಿ ಅಂಗವಿಕಲ ಭಾರತೀಯರನ್ನು ಖಾಸಗಿ ವಿಮಾ ಯೋಜನೆಗಳು ನಿರ್ಬಂಧಿಸುತ್ತಿವೆ ಎಂದು ವರದಿ ಹೇಳಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ದ ನಿರ್ದೇಶನಗಳ ಹೊರತಾಗಿಯೂ ಈ ನಿರ್ಬಂಧಿಸುವಿಕೆ ಮುಂದುವರಿದಿವೆ.
ಕೈಗೆಟುಕಲಾಗದ ಪ್ರೀಮಿಯಂಗಳು, ಅರ್ಜಿ ಆಹ್ವಾನದ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವಿನ ಕೊರತೆಯು ಅಂಗವಿಕಲರಿಗೆ ಪ್ರಮುಖ ಅಡೆತಡೆಗಳಾಗಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಅಂಗವಿಕಲರ ವಿಮೆ ಯೋಜನೆ ಕುರಿತು ಮಾತನಾಡಿರುವ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನ್ಮೀತ್ ನಂದಾ, ‘ಸರ್ಕಾರ ಸಹಾಯಕ ತಂತ್ರಜ್ಞಾನದ ಕೊರತೆ ಸುಧಾರಿಸಲು ಕೆಲಸ ಮಾಡುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯೊಂದಿಗೆ ಐಆರ್ಡಿಎಐನ ಪಾತ್ರವನ್ನು ಹೆಚ್ಚಿಸಿ ಒಟ್ಟುಗೂಡಿಸಬೇಕು. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಒಳಗೊಳ್ಳಲು ಸರ್ಕಾರ ಆಯುಷ್ಮಾನ್ ಭಾರತ್ (PM-JAY) ಅನ್ನು ವಿಸ್ತರಿಸಿದೆ. ಆದರೂ ಕೆಲವರಿಗೆ ಯೋಜನೆಗಳು ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
2024ರಲ್ಲಿ ಹಿರಿಯ ನಾಗರಿಕರಿಗಾಗಿ ಸರ್ಕಾರವು ವಿಸ್ತರಿಸಿದ ‘ಆಯುಷ್ಮಾನ್ ಭಾರತ್ ಅಡಿಯಲ್ಲಿ‘ ಎಲ್ಲಾ ಅಂಗವಿಕಲ ವ್ಯಕ್ತಿಗಳನ್ನು, ವಯಸ್ಕರನ್ನು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರನ್ನು ಈ ಯೋಜನೆಗೆ ಸೇರ್ಪಡಿಸಬೇಕೆಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.